ಉಡುಪಿ, ಸೆ. 17 : ಕುಂದಾಪುರ ತಾಲೂಕಿನ ಗಂಗೊಳ್ಳಿಯ ದೇವಸ್ಥಾನವೊಂದರಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಆತನನು ರಕ್ಷಿಸಲು ಹೋದ ಇನ್ನಿಬ್ಬರು ಸೇರಿ ಮೂವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ.
ದಾಕಹಿತ್ಲುವಿನ ರಾಘವೇಂದ್ರ ಖಾರ್ವಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಲಕ್ಷ್ಮಣ್ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಪಾರು ಮಾಡಲು ಹೋಗಿ ಗಾಯಗೊಂಡವರು.
ಅಮಾವಾಸ್ಯೆ ಪೂಜೆ ಇದ್ದ ಹಿನ್ನೆಲೆ ಭಕ್ತಾದಿಗಳು ಗಂಗೊಳ್ಳಿಯ ಖಾರ್ವಿಕೇರಿ ಸಮೀಪದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದರು. ಇದೇ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದು ಬಂದ ರಾಘವೇಂದ್ರ ಮೈಮೇಲೆ ಸುರಿದುಕೊಂಡಿದ್ದಾನೆ.ಕೂಡಲೇ ಬೆಂಕಿ ಹತ್ತಿಕೊಂಡಿದ್ದು ರಕ್ಷಿಸಲು ಹೋದ ಇಬ್ಬರಿಗೆ ಬೆಂಕಿ ತಾಗಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.








































































