LATEST ARTICLES

ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ

ಉಡುಪಿ : ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ (72 ವರ್ಷ) ಅವರು ಮಾ.28ರಂದು ನಿಧನರಾಗಿದ್ದಾರೆ. ಕೋಟ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಅವರು, ದೀರ್ಘ ಕಾಲದಿಂದಲೂ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಮಾಲಿನಿ ಮಲ್ಯ ಅವರನ್ನು ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಶಿವರಾಮ ಕಾರಂತರ ಕೊನೆಯ ದಿನಗಳವರೆಗೆ ಜೊತೆಗಿದ್ದ ಆಪ್ತ ಸಹಾಯಕಿ ಮಾಲಿನಿ ಮಲ್ಯ ಅವರು ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ಕಾರಂತ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದ ಅವರು, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು.

ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಮಾಲಿನಿ ಸ್ವತಃ ಕಾದಂಬರಿಗಾರ್ತಿಯಾಗಿದ್ದರು. ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮ ಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ಕಾರಂತರ ವಾಹ್ಮಯ ವೃತ್ತಾಂತ, ಕೃತಿ ಕೈಪಿಡಿ, ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲಪ್ರಪಂಚ-3 ಕೃತಿಗಳನ್ನು ಅವರು ರಚಿಸಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ 5 ದಿನ ಪೊಲೀಸರ ವಶಕ್ಕೆ

ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಲು ಮಾ. 28 ರಂದು ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಆರೋಪಿ ಶಾಸಕರ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಶಾಸಕ ಕಚೇರಿ ಮತ್ತು ಮನೆಯಲ್ಲಿ 8 ಕೋಟಿ ರೂಪಾಯಿ ಹೆಚ್ಚು ನಗದು ಪತ್ತೆಯಾಗಿತ್ತು.

ಎಫ್‌ಸಿಆರ್‌ ಕಾಯ್ದೆಯ ಉಲ್ಲಂಘನೆ ಆರೋಪ : ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಕೋಟಿ ದಂಡ

ತಿರುಪತಿ : ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) 10ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಧಿಕಾರಿಗಳ ಚೌಕಾಶಿ ಬಳಿಕ 3 ಕೋಟಿ ರೂ. ದಂಡ ಕಟ್ಟಲಾಗಿದೆ ಎಂದು ಹೇಳಲಾಗಿದೆ.

ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿಯಲ್ಲಿ ಟಿಟಿಡಿಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ, ಎಫ್‌ಸಿಆರ್‌ಎ ನಿಯಂತ್ರಣ ಮಂಡಳಿ ಮತ್ತು ದೇವಾಲಯದ ಟ್ರಸ್ಟ್ ನಡುವೆ ಮಾತುಕತೆ, ಚೌಕಾಶಿ ನಡೆದು ಅಂತಿಮವಾಗಿ ದಂಡದ ಮೊತ್ತವನ್ನು 3 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಟಿಟಿಡಿ ವಿದೇಶಿ ದೇಣಿಗೆಯನ್ನು ಬಳಸಿಕೊಂಡ ರೀತಿಯಲ್ಲೂ ಕೇಂದ್ರ ಸಚಿವಾಲಯ ತಪ್ಪು ಕಂಡುಹಿಡಿದಿದ್ದು, ಇದಲ್ಲದೆ, ಟಿಟಿಡಿ ವಿದೇಶಿ ಕೊಡುಗೆಗಳ ಮೂಲಕ ಗಳಿಸಿದ ಬಡ್ಡಿಯ ಬಳಕೆಯ ಬಗ್ಗೆಯೂ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ದೇವಾಲಯದ ಟ್ರಸ್ಟ್‌ನ ಎಫ್‌ಸಿಆರ್‌ಎ ನೋಂದಣಿಯನ್ನು ತಾಂತ್ರಿಕ ವ್ಯತ್ಯಾಸಗಳಿಂದಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ನಿಧಿಯ ದುರುಪಯೋಗದಿಂದಲ್ಲ ಎಂದು ಹೇಳಲಾಗಿದೆ. ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಯಲ್ಲಿ, ದೇವಾಲಯದ ಟ್ರಸ್ಟ್ 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ದೇಣಿಗೆಗಳನ್ನು ಠೇವಣಿ ಮಾಡಲು ನಿರಾಕರಿಸಿತು. ದಾನಿಗಳ ಗುರುತು ತಿಳಿದಿಲ್ಲ. 2020ರಲ್ಲಿ ಎಫ್‌ಸಿಆರ್‌ಎಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಎನ್‌ಜಿಒಗಳು ವಿದೇಶಿ ಕೊಡುಗೆಗಳನ್ನು ಎಸ್‌ಬಿಐ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದನ್ನು ಅನುಸರಿಸಿ, ಟಿಟಿಡಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಎಫ್‌ಸಿಆರ್‌ಎಯು ‘ಹುಂಡಿ’ಯಲ್ಲಿ ಸ್ವೀಕರಿಸಿದ ಕೊಡುಗೆಗಳ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸಿಲ್ಲ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಂ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮತ್ತು ರಾಜ್ಯ ಸರ್ಕಾರವು ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ಇದರ ನವೀಕರಣವನ್ನು ಟಿಟಿಡಿ ವಿಳಂಬ ಮಾಡಿರುವುದೇ ತೊಂದರೆಗೆ ಕಾರಣ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ಎಫ್‌ಸಿಆರ್‌ಎ ನೋಂದಣಿ ಸ್ಥಗಿತಗೊಂಡಿದೆ. ಇದು ವಿದೇಶಿ ಕೊಡುಗೆ ದುರುಪಯೋಗದಿಂದ ಆಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಕಾರ್ಕಳ ಸಮೀಪದ ಕರ್ವಾಲು ದೇವಸ್ಥಾನಕ್ಕೆ ರವಿಶಾಸ್ತ್ರಿ ಭೇಟಿ

ಕೆ.ಎಲ್.‌ ರಾಹುಲ್‌ ಶ್ರೇಷ್ಠ ಆಟಗಾರ

ರೋಹಿತ್‌ ಶರ್ಮಾ ಮುಂಬರುವ ವಿಶ್ವಕಪ್‌ ಮುನ್ನಡೆಸಲಿದ್ದಾರೆ

ಕಾರ್ಕಳ : ಕೆ.ಎಲ್.‌ ರಾಹುಲ್‌ ಓರ್ವ ಶ್ರೇಷ್ಠ ಆಟಗಾರ. ಮುಂದಿನ ಏಳೆಂಟು ವರ್ಷಗಳ ಕಾಲ ಕ್ರಿಕೆಟ್‌ ಆಡುವ ಸಾಮರ್ಥ್ಯವನ್ನು ರಾಹುಲ್‌ ಹೊಂದಿದ್ದಾರೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಕಾರ್ಕಳ ಸಮೀಪದ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು.

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸಮರ್ಥ, ಅನುಭವಿ ಆಟಗಾರರು, ಪ್ರವರ್ಧಮಾನಕ್ಕೆ ಬರುತ್ತಿರುವ ಯುವಕರಿದ್ದಾರೆ. ಭಾರತೀಯ ತಂಡ ಸಮತೋಲಿತವಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ತಂಡದೆದುರಿನ ಏಕದಿನ ಸರಣಿಯನ್ನು ನಾವು ಕಳೆದುಕೊಂಡಿರಬಹುದು. ಅದರಿಂದ ಅಂತಹ ನಷ್ಟವೇನಿಲ್ಲ. ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ ಎಂದು ರವಿಶಾಸ್ತ್ರಿ ಹೇಳಿದರು.

ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್‌ ಶರ್ಮಾ ಅವರು ಮುನ್ನಡೆಸಲಿದ್ದಾರೆ. ಭಾರತ ಉತ್ತಮ ಪ್ರದರ್ಶನ ತೋರಲಿದೆ. ರಿಷಬ್‌ ಪಂತ್‌ ಬೇಗನೆ ಚೇತರಿಸಿಕೊಳ್ಳಬೇಕು. ಈ ಬಾರಿ ಐಪಿಲ್‌ನಲ್ಲಿ 10 ತಂಡು ಭಾಗವಹಿಸಲಿದ್ದು, ಪಂದ್ಯಾಟಗಳು ಅತ್ಯಂತ ರೋಮಾಂಚನಕಾರಿಯಾಗಿ ನಡೆಯಲಿದೆ ಎಂದರು. ಪತ್ರಕರ್ತ ಮನೋಹರ್‌ ಪ್ರಸಾದ್‌ ಸಂವಾದ ನಿರ್ವಹಿಸಿದರು.

ಮುಂಬೈಯಿಂದ ಆಗಮಿಸಿದ ರವಿಶಾಸ್ತ್ರಿ ಅವರು ಪಾವಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಕರ್ವಾಲಿಗೆ ಆಗಮಿಸಿದರು. ಇಲ್ಲಿನ ವಿಷ್ಟುಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ನಡೆಸಿದರು. ಈ ವೇಳೆ ದೇವಸ್ಥಾನದ ವತಿಯಿಂದ ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕರ್ವಾಲಿಗೆ ಇದು ನನ್ನ 11ನೇ ಭೇಟಿ ಪ್ರತಿ ಭೇಟಿಯೂ ಚೈತನ್ಯದಾಯಕ. ದೇವಸ್ಥಾನ ನವೀಕರಣ ಕಾರ್ಯ ಅತ್ಯಾಕರ್ಷಕವಾಗಿ ಆಗಿದೆ ಎಂದು ವರ್ಣಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪಟ್ಟಾಭಿ ರಾವ್‌, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕಮಾರ್‌ ಹೆಗ್ಡೆ, ಗೌರವಾಧ್ಯಕ್ಷ ಮನೋಹರ್‌ ಪ್ರಸಾದ್‌, ಜಾರ್ಕಳ ಮೋಹನ್‌ ಹೆಗ್ಡೆ, ಎಚ್.‌ ಯುವರಾಜ ನಾಯಕ್‌, ರಮೇಶ್‌ ರಾವ್‌, ಸತೀಶ್‌ ರಾವ್‌, ಶ್ರೀನಿಧಿ, ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಡಪಾಡಿಯಲ್ಲಿ ಸಪ್ತ ಸಂತರ ಸಮಾಗಮ

ವ್ಯಕ್ತಿಯ ವೈಭವೀಕರಣ ಸಂಘಟನೆಯ ತತ್ವವಲ್ಲ – ಜಗದೀಶ್‌ ಕಾರಂತ್‌

ಕಾರ್ಕಳ : ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮೂಲ ಧರ್ಮದ ಆಚಾರ ವಿಚಾರ ಸಂಸ್ಕೃತಿಯನ್ನು ಯುವಪೀಳಿಗೆ ಮರೆಯುತ್ತಿರುವುದು ದುರಂತ. ಪ್ರತಿ ನಿತ್ಯವೂ ಮತಾಂತರ, ಲವ್‌ ಜಿಹಾದ್‌ನಂತಹ ದುಷ್ಕೃತ್ಯಗಳು ನಡೆಯುತ್ತಿದೆ. ಇಂತಹ ದುರಂತಗಳಿಂದ ಧರ್ಮ ರಕ್ಷಣೆಗಾಗಿ ಪ್ರಸ್ತುತ ಸಮಾಜಕ್ಕೆ ಧರ್ಮಜಾಗೃತಿ ಕಾರ್ಯಕ್ರಮ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂತರ ಸಂಗಮ ಮಹತ್ವವಾದುದು ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಅಡಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗದ ಪ್ರಯುಕ್ತ ಮಾ. 27 ರಂದು ನಡೆದ ಸಂತರ ಸಂಗಮ ಎಂಬ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪೇಜಾವರ ಅಧೋಕ್ಷಜ ಮಠದ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀವರ್ಚನ ನೀಡಿ, ಧಾರ್ಮಿಕ ವಿಧಿ ವಿಧಾನಗಳು ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗದೇ ನಿತ್ಯ ಬದುಕಿನಲ್ಲಿ ಮೈಗೂಡಿಸಿಕೊಂಡಾಗ ಸಮಾಜ ಸುಸ್ಥಿರತೆಯನ್ನು ಹೊಂದಲು ಸಾಧ್ಯ. ಸುಖ ಶಾಂತಿಯ ಮೇಲೆ ನಿಯಂತ್ರತೆ ಹಾಗೂ ದೇವರ ಅನುಗ್ರಹವಿದ್ದಾಗ ಮಾತ್ರ ಬದುಕಿಗೆ ಅರ್ಥವಿರುವುದು ಎಂದರು.

ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನದಲ್ಲಿನ ಬಿಂಬ ಶುದ್ಧಿಗಾಗಿ ಬ್ರಹ್ಮಕಲಶ ಹೇಗೆ ಮುಖ್ಯವೋ ಸಮಾಜದ ಶುದ್ಧಿಗಾಗಿ ಸಾಧು ಸಂತರ ಸಮಾಗಮವು ಪ್ರಮುಖವಾದುದು. ಆದರೆ ಸಂತರ ಹಿತವಚನ ಕೇವಲ ಬೋಧನೆಯಾಗದೆ ಸಮಾಜದಲ್ಲಿ ಅನುಕರಣೆಯಾದಾಗ ಕಾರ್ಯಕ್ರಮದ ಹಿಂದಿನ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ದೇವರು ಮತ್ತು ದೇಶದ ನಡುವಿನ ಚಲನಶೀಲವಾದ ಧರ್ಮ ಸದೃಢವಾಗಿದ್ದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದು. ದೇಶದ ಸಂಸ್ಕೃತಿಯ ಉಳಿವಿನಲ್ಲಿ ಸಾಧು ಸಮಾವೇಶದೊಂದಿಗೆ ಧರ್ಮ ಸಂದೇಶದಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಶುಭಸಂಶನೆಗೈದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲ ಇಲ್ಲಿನ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಮಾನಸಿಕ ಬದ್ಧತೆ, ಮಾನವೀಯ ಮೌಲ್ಯ ಹಾಗೂ ಗುರುತತ್ವದ ಅರಿವನ್ನು ಸಮಾಜಕ್ಕೆ ಧಾರೆಯೆರೆಯುವ ನೆಲೆಯಲ್ಲಿ ಅಡಪಾಡಿಯಲ್ಲಿ ನಡೆಯುತ್ತಿರುವ ಸಂತರ ಸಂಗಮ ಕಾರ್ಯಕ್ರಮ ಶ್ಲಾಘನೀಯ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು, ದೇಶವು ಧರ್ಮ ಜಾಗೃತಿಯೊಂದಿಗೆ ಸಂಘಟನಾತ್ಮಕವಾಗಿ ಬೆಳೆದಾಗ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ. ಆದ್ದರಿಂದ ಧರ್ಮ ರಕ್ಷಣೆ ಮತ್ತು ಮುಂದಿನ ಪೀಳಿಗೆ ಸಂಸ್ಕಾರಯುತ ಜೀವನ ಹೊಂದಲು ಇಂದು ಧರ್ಮ ಸಂದೇಶ ನೀಡುವುದು ಅವಶ್ಯ ಎಂದರು. ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ ಭಾರತದ ತಳಹದಿಯೇ ಸನಾತನ ಹಿಂದೂ ಧರ್ಮ. ತ್ಯಾಗ ಮತ್ತು ಶೌರ್ಯದ ಪ್ರತೀಕವಾದ ಹಿಂದೂ ಧರ್ಮದ ಸಂಕೇತ ಕೇಸರಿ. ಯಾವುದೇ ಒಂದು ಗುಂಪು ಅಥವಾ ಪಕ್ಷಕ್ಕೆ ಸೀಮಿತವಾಗದೇ ಧರ್ಮದ ಶ್ರೀ ರಕ್ಷೆಯಾಗಲಿ ಎಂದರು.

ವೈಭವದ ಸ್ವಾಗತ
ಸಾಲು ಸಾಲು ಭಗಧ್ವಜದ ವೈಭವದ ಮೆರವಣಿಗೆಯೊಂದಿಗೆ ಸಪ್ತ ಸಂತರನ್ನು ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಸುಮಾರು 500 ವರುಷಗಳ ಐತಿಹ್ಯವಿರುವ ಅಡಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು 1997 ರಲ್ಲಿ ಪ್ರತಿಷ್ಠಾಪನೆಗೊಂಡು ಹತ್ತು ವರುಷಗಳ ಬಳಿಕ ಶ್ರೀ ಉಮಾಮಹೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಬಳಿಕ ಶ್ರೀ ಕ್ಷೇತ್ರದಲ್ಲಿ ಆರು ಬಾರಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಹಾಗೂ ಐದು ಬಾರಿ ನಾಗಮಂಡಲೋತ್ಸವವು ನಡೆದಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯದ ಕ್ಷೇತ್ರೀಯ ಸಂಚಾಲಕ ಜಗದೀಶ್ ಕಾರಂತ್‌ ಮಾತನಾಡಿ, ಭಾರತವನ್ನು ಹಿಂದೂ ರಾಷ್ಟ್ರ ಮಾಡುವಲ್ಲಿ ಡಾ. ಹೆಗಡೆವಾರ್ ಅವರ ಶ್ರಮ ಹಾಗೂ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಆರಂಭವಾದ ಆರ್‌ಎಸ್‌ಎಸ್‌ ಸಮಾಜಕ್ಕೆ ನೀಡಿದ ಕೊಡುಗೆ ಎಂದಿಗೂ ಅಮರ. ದೇಶಕ್ಕಾಗಿ ಮಹಾನ್‌ ನಾಯಕರನ್ನು ಸೃಷ್ಟಿಸಿದ ಹೆಗ್ಗಳಿಕೆ ಆರ್‌ಎಸ್‌ಎಸ್‌ ನದ್ದಾಗಿದೆ. ಪ್ರಸ್ತುತ ನಾನು ನನ್ನದೆಂಬ ಅಹಂನಿಂದ ಸಂಘಟನೆಯ ಭಾಗವಾಗಿದ್ದವರು ಹಿಂದುತ್ವದ ಹೆಸರಿನಲ್ಲಿ ಚುನಾವಣೆಯ ಅಖಾಡಕ್ಕಿಳಿಯುವ ಸನ್ನಿವೇಶಗಳನ್ನು ಗಮನಿಸಬಹುದಾಗಿದೆ. ಆದರೆ ವ್ಯಕ್ತಿಯ ವೈಭವೀಕರಣ ಸಂಘಟನೆಯ ತತ್ವವಲ್ಲ. ಏಕೆಂದರೆ ವ್ಯಕ್ತಿ ಶಾಶ್ವತನೂ ಅಲ್ಲ, ಪರಿಪೂರ್ಣನೂ ಅಲ್ಲ ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ವಾಸ್ತುತಜ್ಞ ಕೃಷ್ಣರಾಜ ತಂತ್ರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಸ್ತಾನದ ನಾಗಪಾತ್ರಿ ವೇದಮೂರ್ತಿ ಸುಬ್ರಮಣ್ಯ ಮದ್ಯಸ್ಥ, ನಾಗರಾಧಕ ಡಾ. ಎನ್.‌ ಬಾಲಕೃಷ್ಣ ವೈದ್ಯ, ಮಂಗಳೂರು ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌, ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ಸಾಲ್ವಣ್‌ಕರ್, ಪೆಜಕೊಡಂಗೆ ಪಳ್ಳಿ ಶ್ರೀ ಮಹಾಲಿಂಗೇಶ್ವರ ಆಡಳಿತ ಮೊಕ್ತೇಸರ ಜಗದೀಶ್‌ ಹೆಗ್ಡೆ, ಸೂಡ ಸುಬ್ರಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಜಯಶೀಲಾ ಹೆಗ್ಡೆ, ಲಕ್ಷ್ಮೀಪುರ ಶ್ರೀ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್‌ ನಾಯಕ್‌, ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಘ್ಳೆ, ಮುಂಬೈ ಉದ್ಯಮಿ ಉಮೇಶ್‌ ಪೂಜಾರಿ, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗೀಶ್‌ ಕಿಣಿ ಪ್ರಾರ್ಥಿಸಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ರಮೇಶ್‌ ಕಲ್ಲೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಾಯಕ್‌ ವಂದಿಸಿದರು.

ಪಾನ್‌ – ಆಧಾರ್‌ ಕಾರ್ಡ್‌ ಲಿಂಕ್‌ ಅನಿವಾರ್ಯ ಆದರೆ ಗೊಂದಲ ಬೇಡ

0

✒️ ನಳಿನಿ ಎಸ್.‌ ಸುವರ್ಣ

ಪ್ಯಾನ್‌ – ಆಧಾರ್‌ ಕಾರ್ಡ್‌ ಪ್ರಸ್ತುತ ಜೀವನದ ಬಹುದೊಡ್ಡ ಅವಶ್ಯಕತೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಆರ್ಥಿಕ ವಹಿವಾಟುಗಳಲ್ಲಿ ಪಾನ್‌ ಕಾರ್ಡ್‌ ಪ್ರಮುಖ ಆಧಾರವಾದರೆ, ಆಧಾರ್‌ ಕಾರ್ಡ್‌ ಪಾನ್‌ ಕಾರ್ಡ್‌ಗೆ ಪ್ರಮುಖ ಆಧಾರವಾಗಿದೆ. ಈ ನಿಟ್ಟಿನಲ್ಲಿ ಪಾನ್‌ ಆಧಾರ್‌ ಲಿಂಕ್‌ ಮಾಡಲು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿತ್ತು. 1000 ರೂಪಾಯಿ ದಂಡದೊಂದಿಗೆ ಮಾರ್ಚ್ 31ವರೆಗೆ ಗಡುವು ನೀಡಲಾಗಿದ್ದು, ಈಗ ಜೂನ್‌ 30, 2023 ರವೆರೆಗೆ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಕೊನೆಯ ದಿನಗಳಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ.

ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್‌ಎಸ್ ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ದಂಡವಿಲ್ಲದೆ ಕೊನೆಯ ಗಡುವು ಜೂನ್ 30, 2022 ಆಗಿತ್ತು. 1000 ರೂ. ದಂಡದೊಂದಿಗೆ ಕೇಂದ್ರ ಸರ್ಕಾರವು ಲಿಂಕ್ ಮಾಡುವ ಅವಧಿಯನ್ನು ಮಾರ್ಚ್ 31, 2023 ರವರೆಗೆ ನಿಗದಿಪಡಿಸಿತ್ತು.ಒಂದುವೇಳೆ ಈ ದಿನದ ಮೊದಲು ಲಿಂಕ್‌ ಮಾಡದಿದ್ದಲ್ಲಿ ನಂತರ 10,000 ರೂ. ದಂಡ ಪಾವತಿಸಬೇಕಾಗಿತ್ತು. ಇದರಿಂದಾಗಿ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೆಲವರಿಗೆ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಬೇಕೆಂದು ಮೊದಲಿಂದಲೂ ಹೇಳುತ್ತಿದ್ದರೂ ಎಂಬ ಮಾಹಿತಿಯ ಕೊರತೆ ಮತ್ತು ಈಗ ಒಂದು ಸಾವಿರ ದಂಡ ಪಾವತಿಸಬೇಕೆಂದು ಹೇಳುತ್ತಿರುವುದು ಸಂಕಷ್ಟಕ್ಕೆ ಒಳಪಡಿಸಿದೆ. ಆದರೆ ಇದೀಗ ಲಿಂಕ್‌ ಗಡುವನ್ನು ಜೂನ್‌ 30ಕ್ಕೆ ವಿಸ್ತರಿಸುವ ಮೂಲಕ ಜನರ ಗೊಂದಲವನ್ನು ಸರಕಾರ ಬಗೆಹರಿಸಿದೆ.

ಪಾನ್‌ – ಆಧಾರ್‌ ಕಾರ್ಡ್‌ ಲಿಂಕ್‌ ವಿಸ್ತರಣೆ ಹಾಗೂ ಶುಲ್ಕ
ಪಾನ್‌ – ಆಧಾರ್‌ ಕಾರ್ಡ್‌ ಜೋಡಣೆ ಮಾಡಲು ಮೊದಲು 2017 ರಲ್ಲಿ ಜೂನ್‌ 29ಕ್ಕೆ ಆದೇಶ ಹೊರಡಿಸಿದ್ದು 2019ರ ಸೆಪ್ಟಂಬರ್‌ 30ಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಡಿಸೆಂಬರ್‌ 31ರವರೆಗೆ ವಿಸ್ತರಣೆಯ ಆದೇಶ ಸೇರಿದಂತೆ ಒಟ್ಟು 9 ಬಾರಿ ಪಾನ್‌ – ಆಧಾರ್‌ ಕಾರ್ಡ್‌ ಜೋಡಣೆಯ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಮಾ.31, 2022 ರಕ್ಕೂ ಮುನ್ನ ಆಧಾರ್-ಪ್ಯಾನ್ ಜೋಡಣೆ ಉಚಿತವಾಗಿತ್ತು. ಏ.1, 2022 ರಿಂದ 500 ರೂಪಾಯಿಗಳ ದಂಡ ವಿಧಿಸಲಾಗಿತ್ತು ಹಾಗೂ ಜುಲೈ, 1, 2022 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇದೀಗ 10ನೇ ಬಾರಿ ಮತ್ತೊಮ್ಮೆ ಆಧಾರ್‌ ಪಾನ್‌ ಲಿಂಕ್‌ ದಿನಾಂಕವನ್ನು ವಿಸ್ತರಿಸಿದ್ದು, 2023 ರ ಜೂನ್‌ 30 ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ. 2023ರ ಜುಲೈ 1ರಿಂದ, ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದನ್ನು 30 ದಿನಗಳ ಒಳಗೆ 1000 ರೂ ಶುಲ್ಕ ಕಟ್ಟಿ ಲಿಂಕ್ ಮಾಡಿಸಿ ಮತ್ತೆ ಕಾರ್ಯಗತಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಏಕೆ ಇಷ್ಟು ಬಾರಿ ವಿಸ್ತರಣೆ
ಮೊದಲೆರಡು ಬಾರಿ ಜನರಿಗೆ ಮಾಹಿತಿ ಕೊರತೆ ಸಂಬಂಧಿಸಿದಂತೆ ವಿಸ್ತರಣೆ ಮಾಡಲಾಗಿತ್ತು. ನಂತರದ ಎಲ್ಲಾ ವಿಸ್ತರಣೆಯನ್ನು ಕೋವಿಡ್‌ ಸಂಕಷ್ಟದ ಕಾರಣದಿಂದಾಗಿ ಮಾಡಲಾಗಿತ್ತು ಆದರೆ 31-03-2022ರ ವರೆಗೂ ವಿಸ್ತರಣೆಯನ್ನು ಮಾಡಿಯೂ ಹಲವು ಮಂದಿ ಪಾನ್ ಆದಾರ್ ಜೋಡಣೆ ಮಾಡಿಸದ ಕಾರಣ ಇದೀಗ ದಂಡ ಸಹಿತ ಜೋಡಣೆ ಪ್ರಾರಂಭವಾಯಿತು.

ಲಿಂಕ್ ಮಾಡುವುದು ಏಕೆ ಮುಖ್ಯ
ಕಳೆದ ಕೆಲವು ವರ್ಷಗಳಿಂದ ನಕಲಿ ಪಾನ್‌ ಕಾರ್ಡ್‌ಗಳ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಹಣಕಾಸಿನ ವಂಚನೆಯಂತಹ ಘಟನೆಗಳು ನಡೆದಿವೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವ ಕಾರಣ ತೆರಿಗೆ ವಂಚನೆಯಂತಹ ಪ್ರಕರಣಗಳು ಹೆಚ್ಚಿವೆ. ಇದನ್ನು ನಿಯಂತ್ರಿಸಲು ಆಧಾರ್‌ ಪಾನ್‌ ಲಿಂಕ್‌ ಅನಿವಾರ್ಯವಾಗಿದೆ.

ತೆರಿಗೆ ಪ್ರಯೋಜನಗಳು ಮತ್ತು ವಹಿವಾಟುಗಳನ್ನು ಪಡೆಯುವಲ್ಲಿ ತೊಂದರೆ
ಜೂನ್ 30, 2023 ರವರೆಗೆ ಯಾವುದೇ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ರೆ, ಆರ್ಥಿಕ ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಇಲ್ಲದೆ ನೀವು ಒಂದೇ ಬಾರಿಗೆ 5000 ರೂ.ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ, ಅದು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವಲ್ಲಿ ಸಮಸ್ಯೆಗಳಿರುತ್ತವೆ. ಪ್ಯಾನ್, ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ, ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಯಾರಿಗೆ ಪಾನ್‌ ಜೋಡಣೆಯಿಂದ ವಿನಾಯಿತಿ
>80 ವರ್ಷ ಮೇಲ್ಪಟ್ಟವರು
>ಭಾರತೀಯ ಪ್ರಜೆ ಅಲ್ಲದವರು
>ಅನಿವಾಸಿ ಭಾರತೀಯರು
>ಜಮ್ಮು ಕಾಶ್ಮೀರ, ಅಸಾಂ ಮತ್ತು ಮೇಘಾಲಯಾ ರಾಜ್ಯಕ್ಕೆ ಸೇರಿದವರು

ಪಾನ್ ಹಾಗೂ ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಬಗ್ಗೆ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಜನರಲ್ಲಿ ಮನವಿ ಮಾಡಿದೆ. ಕಳೆದ ಮೂರು ವರ್ಷಗಳಿಂದ ಈ ಕೆಲಸ ಜಾರಿಯಲ್ಲಿದೆ. ಮಾಹಿತಿಯ ಕೊರತೆಯಿಂದ ಜನರಲ್ಲಿ ಗೊಂದಲ ಮೂಡಿರುವುದು ಸಹಜ. ಪೆನಾಲ್ಟಿ ಮೊತ್ತ ಕಡಿಮೆ ಮಾಡಿ, ಅವಧಿಯ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವ ಅಗತ್ಯ ಇದೆ.
ರವಿಪ್ರಸಾದ್‌
ಚಾರ್ಟಡ್‌ ಅಕೌಂಟೆಂಟ್

ಆಧಾರ್ ಕಾರ್ಡ ಲಿಂಕ್ ಮಾಡಲು ಒಂದು ಸಾವಿರ ರೂಪಾಯಿ ಚಾರ್ಜು ಇಟ್ಟಿರುವುದು ಮತ್ತು ಅದಕ್ಕೆ ಮಾರ್ಚ 31 ಕೊನೆಯ ದಿನಾಂಕ ನಿಗದಿ ಮಾಡಿರುವುದು ಜನಸಾಮಾನ್ಯರಿಗೆ ಕಷ್ಟವಾಗಿತ್ತು. ಲಿಂಕ್ ಖಡ್ಡಾಯ ಮಾಡಿರುವುದರಲ್ಲಿ ತಪ್ಪಿಲ್ಲ ಆದರೆ ಇಂತಹ ಮಹತ್ವದ ಕೆಲಸದ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿತ್ತು.
ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ
ಶಿಕ್ಷಕರು

ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್ ಅವರಿಗೆ ಭಾರತ ಗೌರವ ಪ್ರಶಸ್ತಿ

ಹೆಬ್ರಿ : ಶಿವಪುರ ಗ್ರಾಮದ ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್‌ ಅವರಿಗೆ ಜುವಾರಿ ನಗರ ಕನ್ನಡ ಸಂಘ ಹಾಗೂ ಜನ್ಮಭೂಮಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾದಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರಿಂದ ಭಾರತ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ. ಜುವಾರಿ ನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಹಾಗೂ ಜನ್ಮಭೂಮಿ ಫೌಂಡೇಶನ್‌ನ ಕಾರ್ಯದರ್ಶಿ ಮಾರುತಿ ಬಡಿಗೇರ್ ಉಪಸ್ಥಿತರಿದ್ದರು.

ಪುರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಪ್ರದೀಪ್‌ ರಾಣೆಗೆ ಅಭಿನಂದನೆ

ಕಾರ್ಕಳ : ಪುರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ 13 ನೇ ವಾರ್ಡಿನ ಚುನಾಯಿತ ಸದಸ್ಯ ಪ್ರದೀಪ್ ರಾಣೆಯವರಿಗೆ ಕಾರ್ಕಳ ನಗರ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ ಮಾ. 27 ರಂದು ಕಾಳಿಕಾಂಬ ದೇವಸ್ಥಾನದ ಬಳಿ ಜರುಗಿತು. ಪುರಸಭಾ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ಮಾತನಾಡಿ, ಪ್ರದೀಪ್‌ ರಾಣೆಯವರ ಜನಪರ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಪಕ್ಷ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಂತೆ ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರದೀಪ್‌ ರಾಣೆ, ಅಧಿಕಾರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಗಳಿಗೆ ಚ್ಯುತಿ ಬಾರದಂತೆ ಜವಾಬ್ದಾರಿ ನಿಭಾಯಿಸುವೆ. ಸಚಿವ ಸುನೀಲ್‌ ಕುಮಾರ್‌ ಹಾಗೂ ಪಕ್ಷದ ಹಿರಿಯ ಮಾರ್ಗದರ್ಶನದಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯನಿರ್ವಹಿಸಲು ಅವಕಾಶ ದೊರೆತಿರುವುದು ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ವಹಿಸಿದ್ದರು. ಈ ಸಂದರ್ಭ ವಾರ್ಡ್ ಅಧ್ಯಕ್ಷ ಹರೀಶ್ ದೇವಾಡಿಗ, ನಗರ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ನಾಮ ನಿರ್ದೇಶಿತ ಸದಸ್ಯ ಸಂತೋಷ್ ರಾವ್, ಉದ್ಯಮಿ ಜಯಂತ್ ಭಂಡಾರಿ, ಪ್ರಸಾದ್ ದೇವಾಡಿಗ, ಪುರಸಭಾ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಮುಂಬಯಿ ಪೊಲೀಸ್‌ ಇಲಾಖೆಗೆ ವರ್ಗ

ಭಯೋತ್ಪಾದನೆ ನಿಗ್ರಹ ದಳದಲ್ಲಿದ್ದ ದಯಾ ನಾಯಕ್‌

ಮುಂಬಯಿ : ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಕಾರ್ಕಳ ಅಜೆಕಾರು ಸಮೀಪದ ಎಣ್ಣೆಹೊಳೆಯ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರನ್ನು ಸೋಮವಾರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬಯಿ ಪೊಲೀಸ್‌ ಇಲಾಖೆಗೆ ವರ್ಗಾಯಿಸಲಾಗಿದೆ.
ದಯಾ ನಾಯಕ್ ಮತ್ತು ಇತರ ಏಳು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಸಂಬಂಧಿಸಿದ ಆದೇಶವನ್ನು ಹೆಚ್ಚುವರಿ ಮಹಾನಿರ್ದೇಶಕರು (ಸ್ಥಾಪನೆ) ಹೊರಡಿಸಿದ್ದಾರೆ.
ಎಟಿಎಸ್‌ನಲ್ಲಿದ್ದಾಗ, ದಯಾ ನಾಯಕ್ ಅವರು 2021ರಲ್ಲಿ ಥಾಣೆ ಉದ್ಯಮಿ ಮನ್ಸುಖ್ ಹಿರಾನ್ ಅವರ ಹತ್ಯೆಯ ತನಿಖೆಯಲ್ಲಿ ಭಾಗಿಯಾಗಿದ್ದರು, ಅವರ ಹತ್ಯೆ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆ, ಆಂಟಿಲಿಯಾ ಬಳಿ ಸ್ಫೋಟಕ ತುಂಬಿದ ಕಾರನ್ನು ವಶಪಡಿಸಿಕೊಳ್ಳಲು ಸಂಬಂಧಿಸಿದ್ದಾಗಿದೆ.
ಆಂಟಿಲಿಯಾ ಬಾಂಬ್ ಬೆದರಿಕೆ ಮತ್ತು ಹಿರಾನ್ ಕೊಲೆ ಪ್ರಕರಣದ ತನಿಖೆಯನ್ನು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿದ್ದರೂ, ಎಟಿಎಸ್ ಹೈ ಪ್ರೊಫೈಲ್ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಪೊಲೀಸರ ವಿರುದ್ಧ ಸಾಕ್ಷ್ಯ ಸಂಗ್ರಹಿಸಿತ್ತು.
ದಯಾ ನಾಯಕ್ 1990 ರ ದಶಕದಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಖ್ಯಾತಿಗೆ ಬಂದಿದ್ದರು. ಮುಂಬಯಿಯ ಭೂಗತ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗ ಸುಮಾರು 100 ಪಾತಕಿಗಳನ್ನು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಇದನ್ನೂ ಓದಿ: https://newskarkala.com/2022/09/01/daya-nayak-3/

ಮಿಯಾರ್‌ನಲ್ಲಿ ಸೋಲಾರ್‌ ಲ್ಯಾಂಪ್‌ ವಿತರಣೆ

10 ಫಲಾನುಭವಿಗಳಿಗೆ ಮನೆ ದುರಸ್ತಿಗೆ ಚೆಕ್ ಹಸ್ತಾಂತರ

ಕಾರ್ಕಳ: ಮಿಯಾರು ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 220 ಕುಟುಂಬಗಳಿಗೆ ಸೋಲಾರ್ ಲ್ಯಾಂಪ್ ವಿತರಣೆ ಮತ್ತು 10 ಫಲಾನುಭವಿಗಳಿಗೆ ಮನೆ ದುರಸ್ತಿಗೆ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು. ಗಿರೀಶ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿಯ ನಾಮನಿರ್ದೇಶಕ ಮಾಜಿ ಸದಸ್ಯ ಪ್ರಕಾಶ್ ಬಲಿಪ, ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸದಸ್ಯೆ ದಿವ್ಯಶ್ರೀ ಗಿರೀಶ್ ಅಮೀನ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ರೇವತಿ ನಾಯ್ಕ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ನಾಗರಾಜ್ ನಿರೂಪಣೆ ಮಾಡಿದರು.