ಜ್ಞಾನಸುಧಾ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ಜನ್ಮದಿನಾಚರಣೆಯ ಸಂಭ್ರಮ

ಕಾರ್ಕಳ : ಬರಡು ಭೂಮಿಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ ಕೀರ್ತಿ ಡಾ.ಸುಧಾಕರ್ ಶೆಟ್ಟಿಯವರಿಗೆ ಸಲ್ಲುತ್ತದೆ. ದಾನ ಮಾಡಲಿಕ್ಕೆ ಮನಸ್ಸು ಬೇಕು. ಅದರ ಜೊತೆಗೆ ಕೊಡುವ ಸಂಸ್ಕಾರವು ಬೇಕು. ಇವೆರಡನ್ನು ಮೈಗೂಡಿಸಿಕೊಂಡ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸುಂದರ ಕಾರ್ಯಕ್ರಮ ಇದಾಗಿದೆ ಎಂದು ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಹೇಳಿದರು.

ಅವರು ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 105ನೇ ಜನ್ಮದಿನದ ಅಂಗವಾಗಿ ಕಾರ್ಕಳ ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯ ತಾಜ್‌ ಗ್ಲಾಸ್ ಮಾಲಕ ಗಣಪತಿ ಪೈ ಮಾತನಾಡಿ, ಸಂಸ್ಥೆ ಮೌಲ್ಯಸುಧಾ ಮತ್ತು ಜ್ಞಾನಸುಧಾವನ್ನು ಎರಡನ್ನು ಕೊಡುತ್ತಾ ಬಂದಿದೆ. ಡಾ. ಸುಧಾಕರ್ ಶೆಟ್ಟಿಯವರು ವ್ಯಾಪಾರ ಮನೋಭಾವದವರಲ್ಲ. ಬದಲಾಗಿ ದಾನದ ಮನೋಭಾವ ಉಳ್ಳವರು. ಆದ್ದರಿಂದ ಈ ಕಾರ್ಯಕ್ರಮವು ಎಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದು ಪ್ರಶಂಸಿದರು.

ಅಜೆಕಾರ್ ಪದ್ಮಗೋಪಲ್‌ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಸ್ವಾಗತಿಸಿ, ಈ ಕಾರ್ಯಕ್ರಮ ಹೆಗ್ಗಳಿಕೆಗೆ ಮಾಡುವ ಕಾರ್ಯಕ್ರಮವಲ್ಲಿ. ಒಂದು ಪರಿಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಅನ್ನುವಂತಹ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಮಕ್ಕಳಿಗೆ ಹೆತ್ತವರ ಮೌಲ್ಯ ಅರಿವಾಗಬೇಕು. ಆ ಮೂಲಕ ತಂದೆ ತಾಯಿಯರ ಬದುಕನ್ನು ಹಸನುಗೊಳಿಸಬೇಕು ಎಂದು ಕರೆಕೊಟ್ಟರು.

ಸನ್ಮಾನ
ಇದೇ ಸಂದರ್ಭ ಕಾರ್ಕಳ ತಾಲೂಕಿನ ವಿಶೇಷ ಮಕ್ಕಳ ಶಾಲೆಯಾದ ಚೇತನ ವಿಶೇಷ ಶಾಲೆ, ವಿಜೇತ ವಿಶೇಷ ಶಾಲೆ ಹಾಗೂ ಅರುಣೋದಯ ವಿಶೇಷ ಶಾಲೆಯನ್ನು ಗುರುತಿಸಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕ ವೃಂದವನ್ನು ಗೌರವಿಸಲಾಯಿತು. ಶೃಂಗೇರಿಯ ತೊರೆಹಡ್ಲು ಶಾಲೆಯ ಎಸ್ಸೆಸೆಲ್ಸಿ ಟಾಪರ್ ವಿದ್ಯಾರ್ಥಿಗಳಿಗೆ 10 ಸಾವಿರವನ್ನು ನೀಡಲಾಯಿತು. ಈ ಮೂಲಕ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟಿನಿಂದ 3 ಲಕ್ಷದ 30 ಸಾವಿರದ 503 ರೂಪಾಯಿ ಈ ಸಂದರ್ಭದಲ್ಲಿ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾ.ಪಂ. ಸದಸ್ಯ ರಹಮತ್ತುಲ್ಲಾ, ಟ್ರಸ್ಟಿಗಳಾದ ವಿದ್ಯಾವತಿ ಎಸ್. ಶೆಟ್ಟಿ, ಅನಿಲ್ ಕುಮಾರ್‌ ಜೈನ್, ಸಂಸ್ಥೆಯ ಹಿತೈಷಿಗಳಾದ ಅಪ್ರಾಯ ಕಿಣಿ, ಕಮಲಾಕ್ಷ ನಾಯಕ್, ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ಕಾರ್ಕಳ ಜ್ಞಾನಸುಧಾದ ಸಿಇಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್ ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ನಿರೂಪಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.

ರಕ್ತದಾನ ಶಿಬಿರ – 87 ಯುನಿಟ್‌ ರಕ್ತ ಸಂಗ್ರಹ
ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ಜನ್ಮದಿನಾಚರಣೆಯ ಸಂಭ್ರಮದ ಪ್ರಯುಕ್ತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಾಗೂ ಹಳೆವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಪ್ರೊಫೆಸರ್‌ ಡಾ. ಗಣೇಶ್ ಮೋಹನ್ ಉದ್ಘಾಟಿಸಿ ಶುಭಹಾರೈಸಿದರು. ರಕ್ತದಾನ ಶಿಬಿರದಲ್ಲಿ 87 ಯುನಿಟ್‌ ರಕ್ತ ಸಂಗ್ರಹಿಸಲಾಯಿತು.



























error: Content is protected !!
Scroll to Top