ಮನರೇಗಾ ಯೋಜನೆಯ ಮೂಲ ಸ್ವರೂಪವೇ ಬದಲಾವಣೆ – ಬಡವರ ಅನ್ನದ ಬಟ್ಟಲಿಗೆ ಕನ್ನ : ಉಡುಪಿ ಜಿಲ್ಲಾ ಕಾಂಗ್ರೆಸ್‌ ವಿಷಾದ

ಉಡುಪಿ : ಮಹಾತ್ಮ ಗಾಂಧೀಜಿ ಅವರ ಗ್ರಾಮಾಭ್ಯುದಯದ ಕನಸನ್ನು ನನಸಾಗಿಸಿದ ಮನರೇಗಾ ಯೋಜನೆಯ ಹೆಸರನ್ನು ವಿಬಿ- ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡುವ ಮೂಲಕ ಯೋಜನೆಯ ಮೂಲ ಸ್ವರೂಪವನ್ನೇ ಬದಲಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಗ್ರಾಮೀಣ ಪರಿಸರದ ಬಡವರ, ಮಹಿಳೆಯರ, ಸಣ್ಣ ರೈತರ ಅನ್ನದ ಬಟ್ಟಲಿಗೆ ಕನ್ನ ಹಾಕಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಿಷಾದ ವ್ಯಕ್ತಪಡಿಸಿದೆ.

ಪ್ರಧಾನಿ ಮನಮೋಹನ ಸಿಂಗ್ ಅವಧಿಯ ಈ ಮಸೂದೆ ಸಂಪೂರ್ಣ ಕೇಂದ್ರ ಸರಕಾರಿ ಅನುದಾನದ ವಿತ್ತೀಯ ಯೋಜನೆ ಆಗಿದೆ. ಈಗಾಗಲೇ ಗ್ರಾಮೀಣ ಪರಿಸರದ ಬಹುಬೇಡಿಕೆಯ ಈ ಯೋಜನೆಯಡಿ ಕೇಂದ್ರ ಸರಕಾರ ರಾಜ್ಯಕ್ಕೆ ಬರಬೇಕಾದ 622 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದಾಗ್ಯೂ ಇದೀಗ ಈ ಪರಿವರ್ತಿತ ಮಸೂದೆ ಕೇಂದ್ರದ ಆರ್ಥಿಕ ಅನುದಾನವನ್ನು ಶೇ. 60 ರೂ. ಗೆ ಇಳಿಸಿದ್ದು ರಾಜ್ಯದ ಅನುದಾನವನ್ನು ಶೇ. 40 ರೂ. ಹೆಚ್ಚುವರಿ ಮಾಡಿ ನಿಗದಿ ಪಡಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ಚಂದ್ರ ಪಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ನಿಯಮದಲ್ಲಿ ಕೆಲಸದ ದಿನಗಳನ್ನು 100ರಿಂದ 125 ದಿನಕ್ಕೆ ಹೆಚ್ಚಿಸಿದೆ. ಮಸೂದೆ ಅನ್ವಯದ ಆದ್ಯತಾ ಕ್ಷೇತ್ರಗಳನ್ನು ಬದಲಿಸಲಾಗಿದ್ದು ನಿರ್ದಿಷ್ಟ ವಲಯವನ್ನು ನಿಗದಿ ಪಡಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾದ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕಾರ್ಮಿಕರು ಮೂಲಸೌಲಭ್ಯ ಅಭಿವೃದ್ದಿಯೂ ಸೇರಿ ಪರಿಸರ ಸಂರಕ್ಷಣೆ, ಜಲಸಂಪನ್ಮೂಲ ಆದಿಯಾಗಿ ಪ್ರಾಕೃತಿಕ ಆದ್ಯತಾ ವಲಯದ ಕೆಲಸಗಳ ಹೊರತಾಗಿ ಗ್ರಾಮೀಣ ಪರಿಸರದ ರೈತ ಸ್ನೇಹಿ ಕೆಲಸಗಳಾದ ಹಟ್ಟಿ, ಕೊಟ್ಟಿಗೆ, ಅಗಳು ಮೊದಲಾದ ಕೆಲಸಗಳ‌ನ್ನು ಕೈ ಬಿಡಲಾಗಿದೆ ಎನ್ನಲಾಗಿದೆ. ಬೀಜ ಬಿತ್ತನೆ ಮತ್ತು ಕೊಯ್ಲಿನ ಅವಧಿಯಲ್ಲಿ ಈ ಯೋಜನೆಯಡಿ ಕೂಲಿ ಕೆಲಸವನ್ನು ನಿರ್ಬಂಧಿಸಿರುವುದು ಮಸೂದೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈ ಹಿಂದಿನ ಸರಕಾರಗಳ ಯೋಜನೆಗಳ ಹೆಸರನ್ನು ಬದಲಿಸುವುದನ್ನೇ ತಮ್ಮ ಸಾಧನೆ ಎಂದು ಬಿಂಬಿಸುವ ಬಿಜೆಪಿಗೆ ಅಬಿವೃದ್ಧಿಯ ಅರ್ಥ ತಿಳಿದಿಲ್ಲ. ಮರ್ಯಾದ ಪುರುಷೋತ್ತಮ ರಾಮನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿಗೆ ದೇಶದ ಸಂವಿಧಾನದ ಬಗ್ಗೆ ವಿಶ್ವಾಸವಿಲ್ಲ. ಈ ಮಸೂದೆಯ ಮೂಲಕ ಬಿಜೆಪಿ ಭಾರತದ ಸಂವಿಧಾನ ಪ್ರತಿಪಾದಿಸಿಕೊಂಡು ಬಂದಿರುವ ಗ್ರಾಮೀಣ ಪರಿಸರದ ಮೂಲಸೌಲಭ್ಯ ಅಭಿವೃದ್ದಿ ಸಾಧನೆಯ ಗ್ರಾಮೀಣ ಜನರ ಮೂಲಭೂತ ಹಕ್ಕಿಗೆ ಚ್ಯುತಿ ತಂದಿದೆ. ದೇಶದ ಹಿತದೃಷ್ಟಿಯಿಂದ ಇದು ಖಂಡನೀಯ ಎಂದು ಬಿಪಿನ್‌ಚಂದ್ರ ಪಾಲ್ ನಕ್ರೆ ತಿಳಿಸಿದ್ದಾರೆ.









































































































error: Content is protected !!
Scroll to Top