ಕಾಂಗ್ರೆಸ್‌ನಿಂದ ಮಾನ ಮುಚ್ಚಿಕೊಳ್ಳುವ ಪ್ರತಿಭಟನೆ

ಕಾರ್ಕಳ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರ ಬಂದ ಕೇವಲ ಮೂರೂ ವರ್ಷಗಳಲ್ಲಿ ಅದೆಷ್ಟು ಬಾರಿ ಬೆಲೆ ಏರಿಕೆ ಮಾಡಿದೆ ಎನ್ನುವುದನ್ನು ಕಾರ್ಕಳ ಕಾಂಗ್ರೆಸ್ ಮೊದಲು ಪಟ್ಟಿ ಮಾಡಿ ಜನರ ಮುಂದಿಡಲಿ. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಜಾಗತಿಕ ಸಮಸ್ಯೆಗಳಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಲ್ಲ, ಬದಲಿಗೆ ತನ್ನ ಅಧಿಕಾರ ದಾಹಕ್ಕಾಗಿ ಹಾಗೂ ಹಣಕಾಸು ನಿರ್ವಹಣೆಯ ವೈಫಲ್ಯದಿಂದ ದಿನಸಿ ಸಾಮಗ್ರಿಗಳಿಂದ ಹಿಡಿದು ಪೆಟ್ರೋಲ್ ಡೀಸೆಲ್ ಸೇರಿ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವನವನ್ನು ಕಷ್ಟದ ಕೂಪಕ್ಕೆ ತಳ್ಳಿದೆ. ಇತಿಹಾಸದಲ್ಲಿ ಕಂಡು ಕೇಳರಿಯದಂತಹ ದುರಾಡಳಿತ ನಡೆಸುತ್ತಿರುವ, ಜನ ವಿರೋಧಿ ಪಕ್ಷ ಇಂದು ಯಾವ ನೈತಿಕತೆಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತದೆ ಅನ್ನೋದೇ ಬಹು ದೊಡ್ಡ ಪ್ರಶ್ನೆ ಎಂದು ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್‌ ನಾಯಕ್‌ ಹೇಳಿದ್ದಾರೆ.

ಯಾವ ಬಿಕ್ಕಟ್ಟಿನ ಕಾರಣಕ್ಕೆ ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿದ್ದು ?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೂರು ಬಾರಿ ಹಾಲಿನ ದರ ಏರಿಕೆ ಮಾಡಿದೆ, ಕೈಗಾರಿಕೆ ಮತ್ತು ವಾಣಿಜ್ಯ ವಿದ್ಯುತ್ ದರವನ್ನು ಮಿತಿಮೀರಿ ಏರಿಕೆ ಮಾಡಿ ಇಂದು ಕೈಗಾರಿಕೆಗಳು ಅಳಿವು ಉಳಿವಿನ ಹೋರಾಟ ನಡೆಸುತ್ತಿವೆ, ಅಬಕಾರಿ ಸುಂಕವನ್ನು 3 ಬಾರಿ ಏರಿಕೆ ಮಾಡಿದೆ, ಇಲೆಕ್ಟ್ರಿಕ್ ವಾಹನದ ಮೇಲೂ ತೆರಿಗೆ ಹಾಕಿದೆ, ಆಸ್ತಿ ನೋಂದಣಿಗೆ ಸ್ಟ್ಯಾಂಪ್ ಡ್ಯೂಟಿ ದರವನ್ನು 6 ಪಟ್ಟು ಏರಿಕೆ ಮಾಡಿದೆ, ಸಾರಿಗೆ ದರ, ಜನನ ಮರಣ ಪ್ರಮಾಣ ಪತ್ರದ ದರವನ್ನೂ ಬಿಡದೆ ಏರಿಕೆ ಮಾಡಿದ್ದಲ್ಲದೆ, ವೃದ್ಧರ ಮಾಸಿಕ ಪಿಂಚಣಿಯನ್ನು ಸಹ ನೀಡದೆ ರಾಜ್ಯದ ಜನರಿಗೆ ಘೋರ ಅನ್ಯಾಯವೆಸಗಿದೆ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಯಾವ ಬಿಕ್ಕಟ್ಟಿನ ಕಾರಣಕ್ಕಾಗಿ ಮಾಡಿದ್ದು ಎನ್ನುವುದನ್ನು ಕಾರ್ಕಳ ಕಾಂಗ್ರೆಸ್ ಜನರ ಮುಂದಿಡಲಿ ಎಂದು ನವಿನ್‌ ನಾಯಕ್‌ ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ವರ್ಷಗಳಿಂದ ಆಗುತ್ತಿರುವ ನಿರಂತರ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿರುವಾಗ ತುಟಿ ಬಿಚ್ಚದ ಕಾರ್ಕಳ ಕಾಂಗ್ರೆಸ್, ಇಂದು ಜಾಗತಿಕ ಇಂಧನ ಬಿಕ್ಕಟ್ಟನ್ನು ಕೇಂದ್ರ ಸರ್ಕಾರದ ವೈಫಲ್ಯ ಎಂದು ಬಿಂಬಿಸಿ ತನ್ನ ಮಾನ ಉಳಿಸಿಕೊಳ್ಳಲು ಬೀದಿಗೆ ಬಂದು ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದವರು ಹೇಳಿದ್ದಾರೆ.

ಜಾಗತಿಕ ಸಂಕಷ್ಟದಲ್ಲೂ ರಾಜಕೀಯ ಲಾಭ ಪಡೆಯುವ ಹುನ್ನಾರ
ಪಶ್ಚಿಮ ಏಷ್ಯಾದ ಯುದ್ಧ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಆ ಯುದ್ಧದ ಪರಿಣಾಮಗಳನ್ನು ಊಹಿಸಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಕ್ಲಿಷ್ಟಕರ ಸಮಯವನ್ನು ಅಂದು ಕೊರೋನಾ ಸಂಕಷ್ಟವನ್ನು ಎದುರಿಸಿದಂತೆ ದೇಶ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ದೇಶದ ಜನರಿಗೆ ಕರೆಕೊಟ್ಟಿದ್ದರು. ಆದರೆ ಜಾಗತಿಕ ಸಮಸ್ಯೆಯನ್ನು ಇಡೀ ದೇಶ ಒಗ್ಗಟ್ಟಿನಿಂದ ಎದುರಿಸಬೇಕು ಎನ್ನುವ ಮನೋಭಾವವೇ ಇಲ್ಲದ ಕಾಂಗ್ರೆಸ್ ಪಕ್ಷ ಮಾತ್ರ ಕೊರೋನಾ ಸಂಕಷ್ಟ ಸಮಯದಲ್ಲೂ ಇದೇ ರೀತಿಯ ನಡತೆಯನ್ನು ಪ್ರದರ್ಶಿಸಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಪ್ರಯತ್ನ ಮಾಡಿತ್ತು, ಇಂದು ಕೂಡ ಅದೇ ಚಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಜಾಗತಿಕ ಸಂಕಷ್ಟದಲ್ಲೂ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಸತತ ಎಂಟು ವಾರಗಳಿಂದ ಪಶ್ಚಿಮ ಏಷ್ಯಾದಲ್ಲಿ ಏರ್ಪಟ್ಟಿರುವ ಯುದ್ಧದ ವಾತಾವರಣ ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ ಇದರಿಂದ ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ದೇಶಗಳು ಇಂಧನ ಸಮಸ್ಯೆಯನ್ನು ಎದುರಿಸುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ತನ್ನ ಆಡಳಿತಾತ್ಮಕ ಜಾಣ್ಮೆಯಿಂದ ಪೆಟ್ರೋಲ್ ಡೀಸೆಲ್ ಹಾಗು ಗೃಹಪಯೋಗಿ ಅಡುಗೆ ಅನಿಲದ ಬೆಲೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ನವೀನ್‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top