ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ – ಪ್ರಸ್ತಾವನೆಗೆ ಕೇಂದ್ರ ಸಂಪುಟ ಅಸ್ತು

ದೆಹಲಿ : ಬಂಗಾಳ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಗಳಿಸಿದ ಬಳಿಕ ಮಂಗಳವಾರ ನಡೆದ ಮೊದಲ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನವಾಗುವುದನ್ನು ತಡೆಯುವ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಳ್ಳಲಾಗಿದೆ. ಬಂಕಿಮ್ ಚಂದ್ರ ಚಟರ್ಜಿಯವರು ರಚಿಸಿದ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯಾದ ಜನ ಗಣ ಮನಕ್ಕೆ ಸಮಾನವಾಗಿ ಗೌರವಿಸುವ ನಿಟ್ಟಿನಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

ಪ್ರಸ್ತುತ ರಾಷ್ಟ್ರಧ್ವಜ ಮತ್ತು ಸಂವಿಧಾನದ ಗೌರವಕ್ಕೆ ಅವಮಾನಿಸುವವರಿಗೆ ಮತ್ತು ರಾಷ್ಟ್ರಗೀತೆ ಹಾಡದಂತೆ ತಡೆಯುವವರಿಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಂಪುಟ ಅನುಮೋದಿಸಿರುವ ಪ್ರಸ್ತಾವನೆಯ ಪ್ರಕಾರ, ಈ ಪಟ್ಟಿಗೆ ವಂದೇ ಮಾತರಂ ಗೀತೆಯನ್ನೂ ಸೇರಿಸಲಾಗಿದೆ.

ದೇಶ ವಂದೇಮಾತರಂ ಗೀತೆಯ 150ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದಕ್ಕಾಗಿ ಕಾಯ್ದೆಯ ಸೆಕ್ಷನ್-3ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಪ್ರಸ್ತುತ ಯಾರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುತ್ತಾರೆಯೋ ಅಥವಾ ಹಾಡುವುದಕ್ಕೆ ಗುಂಪು ಸೇರದಂತೆ ತಡೆಯುತ್ತಾರೆಯೋ ಅಂಥವರಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಮತ್ತೆ ಅದೇ ಅಪರಾಧ ಎಸಗಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಂದೇ ಮಾತರಂ 150ನೇ ವರ್ಷಾಚರಣೆ ಬಗೆಗೆ ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಾಷ್ಟ್ರಗೀತೆಯ ಸ್ಥಾನಮಾನಕ್ಕೆ ಸಮಾನ ಸ್ಥಾನಮಾನವನ್ನು ವಂದೇಮಾತರಂ ಗೀತೆಗೂ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಕಾಂಗ್ರೆಸ್ ಪಕ್ಷ ಇತಿಹಾಸದುದ್ದಕ್ಕೂ ಇದನ್ನು ಕೋಮು ಉದ್ದೇಶಕ್ಕಾಗಿ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಬದಿಗೆ ಸರಿಸಿದೆ ಎಂದು ಆಪಾದಿಸಿದ್ದರು.









































































































error: Content is protected !!
Scroll to Top