ಯೋಗಗುರುಗಳಾದ ಕೃಷ್ಣ ಆಚಾರ್ಯ – ಸುಲೋಚನಾ ನಾಯಕ್ ಅವರಿಗೆ ಸನ್ಮಾನ
ಕಾರ್ಕಳ : ಭಾರತದ ಆಧ್ಯಾತ್ಮ, ಆಯುರ್ವೇದ, ಯೋಗ ಇಂದು ಜಗತ್ತನ್ನೇ ತನ್ನತ್ತ ಆಕರ್ಷಿಸುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಜೂ. 21ರಂದು ಕಾರ್ಕಳ ರಾಮಮಂದಿರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯೋಗವು ಭಾರತದ ಪ್ರಾಚೀನ ಮತ್ತು ಅಮೂಲ್ಯ ಪರಂಪರೆಯಾಗಿದೆ. ದೇಹ, ಮನಸ್ಸಿನ ಸಮಾತೋಲನ ಕಾಪಾಡುವಲ್ಲಿ ಯೋಗ ಸಹಕಾರಿಯಾಗುವುದು ಎಂದರು. ಯೋಗಗುರುಗಳಾದ ಕೃಷ್ಣ ಆಚಾರ್ಯ ಹಾಗೂ ಸುಲೋಚನಾ ಟೀಚರ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ 2 ದಶಕಗಳಿಂದ ನಿರಂತರವಾಗಿ ಯೋಗ ತರಬೇತಿ ಮೂಲಕ ಆರೋಗ್ಯ ರಕ್ಷಣೆಯಂತಹ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು.
ಸನ್ಮಾನ ಕಳೆದ 20 ವರ್ಷಗಳಿಂದ ಶ್ರೀರಾಮ ಮಂದಿರದಲ್ಲಿ ಯೋಗಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ನಿಟ್ಟೆ ಡಾ. ಎನ್.ಎಸ್.ಎ.ಎಂ. ಹೈಸ್ಕೂಲ್ನ ನಿವೃತ್ತ ಶಿಕ್ಷಕ ಕೃಷ್ಣ ಆಚಾರ್ಯ ಹಾಗೂ ಕಾಬೆಟ್ಟು ಹೈಸ್ಕೂಲ್ನ ನಿವೃತ್ತ ಮುಖ್ಯಶಿಕ್ಷಕಿ ಸುಲೋಚನಾ ಅವರನ್ನು ನ್ಯೂಸ್ ಕಾರ್ಕಳ ಹಾಗೂ ಪ್ರಗತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ನ್ಯೂಸ್ ಕಾರ್ಕಳ ಆಡಳಿತ ನಿರ್ದೇಶಕ ಪದ್ಮಪ್ರಸಾದ್ ಜೈನ್, ಡಾ. ಕೌಶಿಕ್, ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಪ್ರಗತಿ ಟ್ರಸ್ಟ್ನ ರಾಮಚಂದ್ರ ಬರೆಪ್ಪಾಡಿ, ಅರುಣ್ ಮಾಂಜ, ಉದ್ಯಮಿ ಸಂತೋಷ್ ರೆಂಜಾಳ, ಎಸ್ಬಿಐ ಅನಂತಶಯನ ಬ್ರಾಂಚ್ ಪ್ರಬಂಧಕ ಪ್ರೇಮ್ ಕುಮಾರ್, ಹಿರಿಯ ಯೋಗತರಬೇತಿದಾರರಾದ ಶಶಿಕಲಾ ಮಣಿಯಾಣಿ, ರಾಮಚಂದ್ರ ದೇವಾಡಿಗ, ಸದಾಶಿವ ಕಿಣಿ, ಗೋವಿಂದ ಅಡಿಗ ಸೇರಿದಂತೆ 35 ಮಂದಿ ಯೋಗಶಿಬಿರಾರ್ಥಿಗಳು ಭಾಗವಹಿಸಿದ್ದರು.
ಪ್ರಗತಿ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಎಂಸಿಎಫ್ನ ಜಂಟಿ ಪ್ರಧಾನ ಪ್ರಬಂಧಕ ಕೀರ್ತನ್ ಕುಮಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ನ್ಯೂಸ್ ಕಾರ್ಕಳದ ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಣ್ ಕುಮಾರ್ ಸಹಕರಿಸಿದರು.