ಮಣಿಪಾಲ ಜ್ಞಾನಸುಧಾ – ಎನ್.ಸಿ.ಸಿ. ನೇವಿ ಉದ್ಘಾಟನೆ

ಉಡುಪಿ : ನಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳಿಂದ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಮನಸ್ಸಿನ ನಿಗ್ರಹ ನಮ್ಮ ಹತೋಟಿಗೆ ಬರುವುದು ಶಿಕ್ಷಣದಿಂದ ಮಾತ್ರ. ಅದರೊಂದಿಗೆ ಎನ್.ಸಿ.ಸಿ.ಯಂತಹ ಅತ್ಯುತ್ತಮ ಸಂಘಟನೆಯನ್ನು ಸೇರುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯ ಭಾವವನ್ನು ಉನ್ನತೀಕರಿಸುತ್ತದೆ ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅಭಿಪ್ರಾಯ ಪಟ್ಟರು. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆದ ಎನ್.ಸಿ.ಸಿ. ನೇವಿ (ನೌಕಾದಳ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಮಾಂಡಿಂಗ್ ಆಫೀಸರ್6 KAR NU NCC ಉಡುಪಿಯ ಕಮಾಂಡರ್ ಅಶ್ವಿನ್ ಎಂ. ರಾವ್‌ ಮಾತನಾಡಿ, ಶ್ವೇತ ವರ್ಣದ ಸಮವಸ್ತ್ರ ಧರಿಸಿ ಬಂದಿರುವ ಎಲ್ಲಾ ಕೆಡಿಟ್‌ಗಳು ತಮ್ಮ ವ್ಯಕ್ತಿತ್ವವನ್ನು ಸಹ ಅದರಷ್ಟೇ ಉತ್ತಮವಾಗಿ ರೂಪಿಸಿಕೊಂಡು, ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ದೇಶಕ್ಕಾಗಿ ಕೊಡುಗೆ ನೀಡುತ್ತಾ ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಶುಭಕೋರಿದರು.

ಉಡುಪಿ ಜಿಲ್ಲಾ ಮಾಜಿ ಸೈನಿಕರ ವೇದಿಕೆ ಅಧ್ಯಕ್ಷ ಸುಬೇದಾರ್ ಮೇಜರ್‌ ಗಣಪಯ್ಯ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು. 6 KAR NU NCC, ಉಡುಪಿಯ ಎಕ್ಸಿಕ್ಯೂಟಿವ್‌ ಆಫೀಸರ್‌ ಲೆಫ್ಟಿನೆಂಟ್‌ ಕಮಾಂಡರ್ ಎಂ.ಎ. ಮುಲ್ತಾನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಣಿಪಾಲ್‌ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಹೇಮಂತ್ ಹಾಗೂ ರವಿ ಜಿ. ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿದರು.









































































































error: Content is protected !!
Scroll to Top