ಉಡುಪಿ : ದ.ಕ. ಉಡುಪಿ ಜಿಲ್ಲೆಯ ಜಾತ್ರೆ, ನೇಮ, ಉತ್ಸವದ ಸಂದರ್ಭ ಕೋಳಿ ಅಂಕ ನಡೆಸಲು ಅನುಮತಿ ನೀಡುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ನ. 24ರಂದು ಲಿಖಿತವಾಗಿ ಮನವಿ ಮಾಡಿಕೊಂಡಿದ್ದಾರೆ.
ಅವಿಭಜಿತ ಜಿಲ್ಲೆಯ ದೇವಸ್ಥಾನ, ದೈವಸ್ಥಾನ, ಗುತ್ತುಮನೆ, ಬರ್ಕೆ, ಚಾವಡಿಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆ, ನೇಮ, ಉತ್ಸವಗಳ ಮರುದಿನ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆದುಕೊಂಡು ಬರುತ್ತಿತ್ತು. ಮುಂದಿನ ದಿನಗಳಲ್ಲೂ ಯಾವುದೇ ಜೂಜಿಗೆ ಅವಕಾಶ ನೀಡದೇ ಕಾಲ ಮಿತಿಯೊಂದಿಗೆ ವರ್ಷಕ್ಕೊಂದು ಬಾರಿ ನಡೆಯುವಂತಹ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಬೇಕೆಂದು ಮಂಜುನಾಥ ಭಂಡಾರಿ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.



































































