ವ್ಯಾಯಾಮ ಮಾಡಿದ ಬಳಿಕ ಹೃದಯಾಘಾತ
ಬೆಂಗಳೂರು: ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಶುಕ್ರವಾರ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ. ಭುಜಂಗ ಶೆಟ್ಟಿ ಅವರು ಮನೆಗೆ ತೆರಳಿದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು.
ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳ ತಪಾಸಣೆ ಮಾಡಿದ ಡಾ. ಭುಜಂಗ ಶೆಟ್ಟಿ ಸಂಜೆ ಮನೆಗೆ ಹೋಗಿ ಮನೆಯಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡಿದ್ದರು. ಅನಂತರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಆಸ್ಪತ್ರೆಗೆ ಕರೆತರುವ ವೇಳೆ ಹೃದಯ ಬಡಿತ ನಿಂತು ಹೋಗಿದ್ದು, ಆಸ್ಪತ್ರೆಯಲ್ಲಿ ಸಿಪಿಆರ್ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಮೃತದೇಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದಲ್ಲಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಂಡು ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ಡಾ.ಭುಜಂಗಶೆಟ್ಟಿ ಅವರು ಗೆದ್ದಿದ್ದರು. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಳ್ಳುವಂತೆ ಅನೇಕರಿಗೆ ಅವರು ಸಲಹೆ ನೀಡಿದ್ದರು.















































































