ಕರ್ನಾಟಕ ರಾಜ್ಯದ ವ್ಯಾಪ್ತಿಯ ಪ್ರದೇಶದ ಒಳಗೆ ಸಾಹಿತ್ಯಿಕ, ವೈಜ್ಞಾನಿಕ, ದತ್ತಿ ಮತ್ತು ಇತರ ಸಂಘಗಳ ನೋಂದಣಿಗೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಎಂಬ ಕಾನೂನು 01-01-1980 ರಿಂದ ಜ್ಯಾರಿಯಲ್ಲಿರುತ್ತದೆ. ದಾನ ಪ್ರಚಾರ, ಶಿಕ್ಷಣ, ವಿಜ್ಞಾನ, ಸಾಹಿತ್ಯ ಅಥವಾ ಲಲಿತ ಕಲೆಗಳ ಪ್ರಚಾರ, ಕ್ರೀಡೆಗಳ ಪ್ರಚಾರ, ವಾಣಿಜ್ಯ ಅಥವಾ ಕೈಗಾರಿಕೆ ಅಥವಾ ಯಾವುದೇ ಇತರ ಉಪಯುಕ್ತ ಜ್ಞಾನಕ್ಕೆ ಸಂಬಂಧಿಸಿದ ಜ್ಞಾನದ ಬೋಧನೆ ಮತ್ತು ಪ್ರಸರಣ, ರಾಜಕೀಯ ಶಿಕ್ಷಣದ ಪ್ರಸರಣ, ಸದಸ್ಯರಲ್ಲಿ ಸಾಮಾನ್ಯ ಬಳಕೆಗಾಗಿ ಅಥವಾ ಸಾರ್ವಜನಿಕರಿಗೆ ಮುಕ್ತವಾಗಿರುವ ಗ್ರಂಥಾಲಯಗಳು ಅಥವಾ ಓದುವ ಕೊಠಡಿಗಳ ಅಡಿಪಾಯ ಅಥವಾ ನಿರ್ವಹಣೆ, ಅಥವಾ ಸಾರ್ವಜನಿಕ ವಸ್ತುಸಂಗ್ರಹಾಲಯಗಳು ಮತ್ತು ಚಿತ್ರಕಲೆ ಮತ್ತು ಇತರ ಕಲಾಕೃತಿಗಳ ಗ್ಯಾಲರಿಗಳು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸರಿಯಾದ ಬಳಕೆಯನ್ನು ಉತ್ತೇಜಿಸುವುದು ಮತ್ತು ಭೂಮಿ, ವಿದ್ಯುತ್, ನೀರು, ಅರಣ್ಯ ಮತ್ತು ಇತರ ಸಂಪನ್ಮೂಲಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳಂತಹ ವಿರಳ ಮೂಲಸೌಕರ್ಯ ಸೌಲಭ್ಯಗಳು, ನೈಸರ್ಗಿಕ ಇತಿಹಾಸ, ಯಾಂತ್ರಿಕ ಮತ್ತು ತಾತ್ವಿಕ ಆವಿಷ್ಕಾರಗಳು, ಉಪಕರಣಗಳು ಅಥವಾ ವಿನ್ಯಾಸಗಳ ಸಂಗ್ರಹ, ಮತ್ತು ತಮ್ಮ ಲಾಭ ಅಥವಾ ಇತರ ಆದಾಯವನ್ನು ತಮ್ಮ ಉದ್ದೇಶಗಳನ್ನು ಉತ್ತೇಜಿಸುವಲ್ಲಿ ಅನ್ವಯಿಸಲು ಉದ್ದೇಶಿರುವ ಮತ್ತು ತಮ್ಮ ಸದಸ್ಯರಲ್ಲಿ ಯಾವುದೇ ಲಾಭಂಶ ಅಥವಾ ಲಾಭದ ವಿತರಣೆಯನ್ನು ನಿಷೇಧಿಸುವ ಉದ್ದೇಶವನ್ನು ಹೊಂದಿರುವ ಸಂಸ್ಥೆಗಳಿಗೆ ಈ ಕಾಯ್ದೆಯು ಅನ್ವಯವಾಗುತ್ತದೆ.
ಈ ಮೇಲ್ಕಾಣಿಸಿದ ಯಾವುದೇ ಉದ್ದೇಶಕ್ಕಾಗಿ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಏಳು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು, ಒಟ್ಟು ಸೇರಿ ಸಂಘವನ್ನು ರಚಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರತಿಯೊಂದು ಸಂಘದ ಜ್ಞಾಪಕ ಪತ್ರದಲ್ಲಿ (ಮೆಮೊರಾಂಡಮ್ ಆಫ್ ಅಸೋಸಿಯೇಶನ್) ರಚಿಸಲು ಇಚ್ಚಿಸುವ ಸಮಾಜದ ಹೆಸರು, ವಿಷಯ, ಆಡಳಿತ ಮಂಡಳಿಯ ಸದಸ್ಯರ ಮತ್ತು ಹೆಸರುಗಳು ವಿಳಾಸಗಳು ಮತ್ತು ಉದ್ಯೋಗಗಳು, ಸಂಘದ ನೋಂದಾಯಿತ ಕಚೇರಿ ಇರುವ ಸ್ಥಳವನ್ನು ಸದಸ್ಯರ ಪ್ರವೇಶ ಸಾಮಾನ್ಯ ಸಭೆಗಳು ಸದಸ್ಯರ ಮತದಾನ ಸೇರಿದಂತೆ ಅಂತಹ ಸಭೆಗಳಲ್ಲಿನ ನಡಾವಳಿಗಳು, ಆಡಳಿತ ಮಂಡಳಿ ಮತ್ತು ಆಡಳಿತ ಮಂಢಳಿಯ ಸಭೆಗಳ ನಡಾವಳಿಗಳಿಗೆ ಸಂಬಂಧಿಸಿದ ನಿಬಂಧನೆಗಳೊಂದಿಗೆ ನೋಂದಾಯಿಸಬೇಕು. ಸಂಘಗಳ ನೋಂದಣಿಗಾಗಿ ಸಂಘದ ಜ್ಞಾಪಕ ಪತ್ರ ಮತ್ತು ಸಂಘದ ನಿಯಮಗಳು ಮತ್ತು ನಿಬಂಧನೆಗಳನ್ನು ರಿಜಿಸ್ಟ್ರಾರ್ಗೆ ಸಲ್ಲಿಸಬೇಕು. ಈ ಕಾಯ್ದೆಯ ಎಲ್ಲಾ ಅವಶ್ಯಕತೆಗಳು ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸಹಾಯಕ ರಿಜಿಸ್ಟ್ರಾರ್ಗೆ ತೃಪ್ತಿಯಾದರೆ, ಅವರು ಸಂಘದ ಜ್ಞಾಪಕ ಪತ್ರ ಮತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ನೋಂದಾಯಿಸಿ ಸಂಘವನ್ನು ನೋಂದಾಯಿಸಿದ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕು. ಒಂದು ವೇಳೆ ಸಹಾಯಕ ರಿಜಿಸ್ಟಾçರ್ ಸಂಘವನ್ನು ನೋಂದಾಯಿಸಲು ನಿರಾಕರಿಸಿದರೆ, ಸಂಘವನ್ನು ನೋಂದಾಯಿಸಲು ನಿರಾಕರಿಸಿದ ಮಾಹಿತಿ ಬಂದ ದಿನಾಂಕದಿಂದ ಅರವತ್ತು ದಿನಗಳ ಒಳಗೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಈ ಕಾಯಿದೆಯಡಿಯಲ್ಲಿ ನೋಂದಾಯಿಸಲಾದ ಪ್ರತಿಯೊಂದು ಸಂಘವು ಪ್ರತಿ ವರ್ಷ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಬೇಕು, ಇದನ್ನು ವಾರ್ಷಿಕ ಸಾಮಾನ್ಯ ಸಭೆ ಎಂದು ಕರೆಯಲಾಗುತ್ತದೆ, ಇದರಲ್ಲಿ ಹಿಂದಿನ ವರ್ಷದ ಸಂಘದ ನಿರ್ವಹಣೆಯ ವರದಿ, ಬ್ಯಾಲೆನ್ಸ್ ಶೀಟ್, ಆದಾಯ ಮತ್ತು ವೆಚ್ಚದ ಖಾತೆ ಮತ್ತು ಲೆಕ್ಕಪರಿಶೋಧಕರ ವರದಿಯ ಲೆಕ್ಕಪರಿಶೋಧಿತ ಪ್ರತಿಯನ್ನು ಅನುಮೋದನೆಗಾಗಿ ಸಲ್ಲಿಸಬೇಕು. ಒಂದು ಸಂಘವು ನೋಂದಣಿಯಾದ ಹದಿನೆಂಟು ತಿಂಗಳೊಳಗೆ ಮೊದಲ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಬೇಕು. ಸಂಘದ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮೊದಲ ವಾರ್ಷಿಕ ಸಾಮಾನ್ಯ ಸಭೆ ನಡೆದ ವರ್ಷದ ಅವಧಿ ಮುಗಿದ ಒಂಬತ್ತು ತಿಂಗಳೊಳಗೆ ನಡೆಸಬೇಕು ಮತ್ತು ನಂತರ ಪ್ರತಿ ವರ್ಷದ ಅವಧಿ ಮುಗಿದ ಒಂಬತ್ತು ತಿಂಗಳೊಳಗೆ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಬೇಕು. ಈ ಕಾಯಿದೆಯಡಿಯಲ್ಲಿ ನೋಂದಾಯಿಸಲಾದ ಪ್ರತಿಯೊಂದು ಸಂಘದ ಆಡಳಿತ ಮಂಡಳಿಯು, ಸಂಘದ ನೋಂದಾಯಿತ ಕಚೇರಿಯಲ್ಲಿ ಅಥವಾ ಆಡಳಿತ ಮಂಡಳಿಯು ಸೂಕ್ತವೆಂದು ಭಾವಿಸುವ ರಾಜ್ಯದ ಇತರ ಸ್ಥಳದಲ್ಲಿ, ಸರಿಯಾದ ಲೆಕ್ಕಪತ್ರ ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಒಂದು ಸಂಘದ ಪ್ರತಿಯೊಂದು ಬ್ಯಾಲೆನ್ಸ್ ಶೀಟ್ ವರ್ಷದ ಅಂತ್ಯದ ವೇಳೆಗೆ ಸಂಘದ ವ್ಯವಹಾರಗಳ ಸ್ಥಿತಿಯ ನಿಜವಾದ ಮತ್ತು ನ್ಯಾಯಯುತ ನೋಟವನ್ನು ನೀಡುತ್ತದೆ.























