ಬೆಂಗಳೂರು: ಎಲ್ಲಾ ವಸ್ತುಗಳಿಗೂ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಹಾಲು ಉತ್ಪಾದನಾ ವೆಚ್ಚ ಸಹ ಹೆಚ್ಚಾಗಿದೆ. ಆದ್ದರಿಂದ ರೈತರಿಂದ ಖರೀದಿ ಮಾಡುವ ಪ್ರತಿ ಲೀ. ಹಾಲಿಗೆ 8 ರೂ. ಏರಿಸಬೇಕು. ಜೊತೆಗೆ ಹಾಲು ಉತ್ಪಾದಕ ರೈತರಿಗೆ ನೀಡುವ ಗೌರವ ಧನವನ್ನು 8 ರೂ. ಗೆ ಹೆಚ್ಚಿಸಬೇಕು ಎಂದು ಬೇರೆ ಬೇರೆ ಹಾಲು ಒಕ್ಕೂಟಗಳ ನಿರ್ದೇಶಕರುಗಳು ಆದೇಶಿಸಿದ್ದಾರೆ.
ಈ ಸಂಬಂಧ ಕೆ.ಎಂ.ಎಫ್. ನ ಮಾಜಿ ಅಧ್ಯಕ್ಷ ಪಿ. ನಾಗರಾಜ್ ಅವರು ಮಾತನಾಡಿದ್ದು, ಸರ್ಕಾರ ಮೂರು ದಿನಗಳಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳದೇ ಹೋದರೆ ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧ ಚಲೋ ನಡೆಸುವ ನಿರ್ಧಾರ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ ಕಾರಣ ಪಶುಗಳ ಆಹಾರ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಪಶುಗಳ ಔಷಧ, ಹಾಲು ಸಂಸ್ಕರಣಾ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಈಗ ಹಾಲು ಉತ್ಪಾದಕ ಕೃಷಿಕರಿಗೆ ನೀಡಲಾಗುತ್ತಿರುವ 35 ರೂ. ಅವರು ಮಾಡುವ ವೆಚ್ಚಕ್ಕೆಯೇ ಸರಿ ಹೊಂದುತ್ತಿದೆ. ಅವರಿಗೆ ಯಾವುದೇ ಆದಾಯ,ಉಳಿತಾಯ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇತರ ರಾಜ್ಯಗಳಲ್ಲಿ ಹಾಲಿನ ದರವು ಕರ್ನಾಟಕಕ್ಕಿಂತ ಕನಿಷ್ಠ 10 ರೂ. ಜಾಸ್ತಿ ಇದೆ. ಅಮುಲ್, ಮದರ್ ಡೇರಿ, ಗೋಕುಲ್, ಸರಾಸ್, ವಿಜಯಾ, ಹೆರಿಟೇಜ್, ಎಂಐಎಲ್ಎಂಎ, ವೆರ್ಕಾ ಸಹಿತ ವಿವಿಧ ಹಾಲಿನ ಸಂಸ್ಥೆಗಳಲ್ಲಿ ಹಾಲಿನ ದರ ಜಾಸ್ತಿ ಇದೆ. ತಮಿಳುನಾಡಿನ ಅವಿನ್ನಲ್ಲಿ ಮಾತ್ರ ಕೆಎಂಎಫ್ಗಿಂತ ಕಡಿಮೆ ದರ ಇದೆ ಎಂದು ಹೇಳಿದ್ದಾರೆ.









































































