ಕುಮ್ಕಿ ವಿಚಾರ ಮುಂದಿಟ್ಟು ಹಕ್ಕುಪತ್ರ ವಿಳಂಬ ಮಾಡಬೇಡಿ : ಅಧಿಕಾರಿಗಳಿಗೆ ಸುನಿಲ್ ಕುಮಾರ್ ಸೂಚನೆ
ಹೆಬ್ರಿ : ಕುಮ್ಕಿ ವಿಚಾರವನ್ನು ಮುಂದಿಟ್ಟು ಜಮೀನಿನ ಹಕ್ಕುಪತ್ರ ನೀಡುವುದನ್ನು ವಿಳಂಬ ಮಾಡಬೇಡಿ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಜು. 21ರಂದು ಹೆಬ್ರಿ ತಾಲೂಕು ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವಿಳಂಬ ಮಾಡದೆ ಜನಸ್ಪಂದನದಲ್ಲಿ ಬಂದ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಿ ಎಂದು ಸೂಚಿಸಿದರು.
ಸಾರ್ವಜನಿಕರು 94ಸಿ ಹಕ್ಕುಪತ್ರ, ಜಮೀನಿನ ಹಕ್ಕಪತ್ರ, ಪಡಿತರ ಚೀಟಿ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಪ್ರಗತಿಪರ ಹೋರಾಟಗಾರ ಕೆರೆಬೆಟ್ಟು ಸಂಜೀವ ಶೆಟ್ಟಿಯವರು ಭೂನ್ಯಾಯ ಮಂಡಳಿಗೆ ಖಾಯಂ ಸಹಾಯಕ ಕಮೀಷನರ್ ನೇಮಕ ಸಹಿತ ಹಲವು ವಿಚಾರಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಸಭೆಯಲ್ಲಿ 94ಸಿ ಹಕ್ಕುಪತ್ರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸವಲತ್ತು ವಿತರಿಸಲಾಯಿತು. ಹೆಬ್ರಿಯ ಪ್ರಭಾರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಹೆಬ್ರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ರಾವ್, ಸಹಾಯಕ ನಿರ್ದೇಶಕ ದಿನೇಶ್, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.


































































