ಹರಿಹರ : ಹನಗವಾಡಿ ಸಮೀಪದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟಿಸಲಾಗಿದೆ. ಸೋಮವಾರ ನಡೆದ ಪೀಠದ ಧರ್ಮದರ್ಶಿಗಳ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸ್ವಾಮೀಜಿಯವರನ್ನು ಪದಚ್ಯುತಗೊಳಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಪೀಠದ ಆವರಣದಲ್ಲಿ ನಡೆದ 12 ಮಂದಿ ಧರ್ಮದರ್ಶಿಗಳ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಟ್ರಸ್ಟಿ ಬಸವರಾಜ ದಿಂಡೂರ, ಪೀಠದ ಹಿತದೃಷ್ಟಿಯಿಂದ ಮತ್ತು ಸಮಾಜದ ಆಶಯದಂತೆ ಈ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಪದಚ್ಯುತಿಗೆ ಮುಖ್ಯ ಕಾರಣ
ಟ್ರಸ್ಟಿಗಳ ಮಾಹಿತಿ ಪ್ರಕಾರ ವಚನಾನಂದ ಶ್ರೀಗಳ ಉಚ್ಚಾಟನೆಗೆ ಪ್ರಮುಖವಾಗಿ ‘ದ್ವಂದ್ವ ಪೀಠ’ದ ವಿವಾದ ಕಾರಣವಾಗಿದೆ ಎನ್ನಲಾಗಿದೆ. ವಚನಾನಂದ ಶ್ರೀಗಳು ಈ ಹಿಂದೆ ಸ್ಥಾಪಿಸಿದ್ದ ‘ಶ್ವಾಸಪೀಠ’ ಅಥವಾ ‘ಹರಿಹರ ಪಂಚಮಸಾಲಿ ಪೀಠ’ ಇವೆರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವಂತೆ ಟ್ರಸ್ಟ್ ಸೂಚಿಸಿತ್ತು. ಯಾವುದಾದರೂ ಒಂದು ಪೀಠಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುವಂತೆ ಶ್ರೀಗಳಿಗೆ ತಿಳಿಸಲಾಗಿತ್ತು. ಆದರೆ, ಅವರು ಶ್ವಾಸಗುರು ಪೀಠವನ್ನು ತ್ಯಜಿಸಲು ಒಪ್ಪಿರಲಿಲ್ಲ. ಟ್ರಸ್ಟ್ನ ನಿರ್ಧಾರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರನ್ನು ಉಚ್ಚಾಟಿಸುವುದು ಅನಿವಾರ್ಯವಾಯಿತು ಎಂದು ದಿಂಡೂರ ಸ್ಪಷ್ಟಪಡಿಸಿದರು.
ಕಳೆದ ಕೆಲವು ಸಮಯದಿಂದ ಪೀಠದ ಆಡಳಿತ ಮಂಡಳಿ ಮತ್ತು ಶ್ರೀಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಅಧಿಕೃತವಾಗಿ ಪದಚ್ಯುತಿಗೊಳಿಸಿರುವುದು ಪಂಚಮಸಾಲಿ ಸಮಾಜದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಕೈಗೊಂಡಿರುವ ಈ ನಿರ್ಧಾರದ ಕುರಿತು ವಚನಾನಂದ ಶ್ರೀಗಳು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ಉತ್ತರಾಧಿಕಾರಿಗಳ ಆಯ್ಕೆ ಹಾಗೂ ಪೀಠದ ಭವಿಷ್ಯದ ಕುರಿತು ಸಮಾಜದ ಮುಖಂಡರು ಸದ್ಯದಲ್ಲೇ ಮತ್ತೊಂದು ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.




















