ಹೆಬ್ರಿ : ಶಿವಪುರ ಶ್ರೀ ಕ್ಷೇತ್ರ ಸೂರಿಮಣ್ಣು ಮಠದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀ ನಾರಾಯಣ ದೇವರ ಸನ್ನಿಧಿಯಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವವು ಫೆ. 2 ರಂದು ನಡೆಯಿತು. ಮಠದ ಹಿರಿಯ ಅರ್ಚಕ ಎಸ್. ಸದಾಶಿವ ಉಪಾಧ್ಯಾಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರದ ಭಜನಾ ತಂಡದಿಂದ ಗುರುವಾರ ಮಧ್ಯಾಹ್ನ ಆರಂಭವಾದ ಭಜನಾ ಕಾರ್ಯಕ್ರಮ ವಿವಿಧ ಕುಣಿತ ಭಜನಾ ಮಂಡಳಿಗಳಿಂದ ಶುಕ್ರವಾರ ಸೂರ್ಯೋದಯದ ಸಮಯದಲ್ಲಿ ಸಂಪನ್ನಗೊಂಡಿತು. ಉಡುಪಿ ಶೀರೂರು ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲಸಂಸ್ಥಾನ ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಪಟ್ಟದದೇವರ ಪೂಜೆ, ಪಾದಪೂಜೆ, ಮಂತ್ರಾಕ್ಷತೆ, ಗಣಯಾಗ, ಸತ್ಯನಾರಾಯಣ ಪೂಜೆ, ರಾತ್ರಿ ದೇವರಿಗೆ ರಂಗಪೂಜೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.