ತುಳುನಾಡಿನ ತುಳು ಜನಪದ ಚರಿತ್ರೆಯಲ್ಲಿ ಬಂದಿರುವ ಕೋಟಿ ಚೆನ್ನಯ ವೀರ ಪುರುಷರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ನಾಮಕರಣ ಮಾಡುವ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ಒತ್ತಾಯ ದಿನೇ ದಿನೇ ಹೆಚ್ಚುತ್ತ ಹೊಸ ತಿರುವುಗಳನ್ನು ಪಡೆಯುತ್ತಿದೆ. ಇಲ್ಲಿ ಒಂದು ನಿರ್ಧಿಷ್ಟ ಜಾತಿ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡಿದಂತಾಗುವ ಭಯವೂ ರಾಜಕಾರಣಿಗಳ ಮನದಲ್ಲಿದೆ. ಆ ಹೆಸರು ಬೇಡವೇ ಬೇಡ ಎಂದು ಖಡಾಖಡಿಯಾಗಿ ವಿರೋಧಿಸಿ ಹೇಳಿಕೆ ಕೊಡುವುದೂ ಒಂದು ಬಗೆಯ ಧರ್ಮ ಸಂಕಟ ಮತ್ತು ವಿವಾದಕ್ಕೆ ಆಸ್ಪದಕೊಟ್ಟಂತಾಗುತ್ತಿದೆ. ಅದಕ್ಕೋಸ್ಕರ ಬೇರೆ ಹೆಸರುಗಳನ್ನು ಸೂಚಿಸುತ್ತ ಇರುವುದರಿಂದ ಬೇಡಿಕೆಯನ್ನೆ ಇಕ್ಕಟ್ಟಿಗೆ ಸಿಲುಕಿಸಿ ಬಿಡಲಾಗುತ್ತಿದೆ. ಅದೂ ಒಂದು ವ್ಯವಸ್ಥಿತ ರಾಜಕೀಯ ತಂತ್ರಗಾರಿಕೆಯೆ.
‘ಬ್ರಹ್ಮ ಬೈದ್ಯ’ ಕೋಟಿ ಚೆನ್ನಯರ ಕುಲದೈವವಾಗಿರುತ್ತದೆ. ಅದುವೆ ಬಿಲ್ಲವರಿಗೂ ಕುಲದೈವವೆ ಆಗಿದೆ. ಹಾಗಾಗಿ ಕೋಟಿ ಚೆನ್ನಯರೂ ಬಿಲ್ಲವ ಜಾತಿಗೆ ಸೇರಿದವರೆಂಬುದು ಈ ತನಕದ ನಂಬಿಕೆ ಹಾಗೂ ಆಚರಣೆ. ಕೋಟಿ ಚೆನ್ನಯರು ಬಿಲ್ಲವರದ್ದೆ ಪವಾಡ ಪುರುಷರೆಂದು ಬಿಂಬಿಸಲಾಗಿದೆ. ವಿಚಾರ ಏನೇ ಆಗಿರಲಿ, ಕೋಟಿ ಚೆನ್ನಯರು ತುಳುನಾಡಿನ ಇತಿಹಾಸದ ಮಹಾ ಪುರುಷರು. ಅವರ ಹೆಸರನ್ನು ರಾಜಕೀಯಕ್ಕೆಳೆದು ತಂದಿರುವುದು ತುಂಬಾ ವಿಷಾದದ ಸಂಗತಿ. ಧರ್ಮ, ದೇವರನ್ನು ಭಾವನಾತ್ಮಕವಾಗಿ ಬಳಸಿಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿಯಂತೆ ಕಾಂಗ್ರೆಸ್ಸು ಕೂಡಾ ಬಿಲ್ಲವ ಸಮುದಾಯವನ್ನು ಮತ್ತೆ ತನ್ನ ಬೆಂಬಲಕ್ಕೆಳೆದುಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೊಸ ನಾಮಕರಣ ಮಾಡಬೇಕೆನ್ನುವ ವಿಚಾರವನ್ನು ಹೊರತಂದಿತು. ಅಂಥ ಇತಿಹಾಸ ಪುರುಷರ ಹೆಸರನ್ನು ಸರಕಾರಿ ಅಂಗ ಸಂಸ್ಥೆಗಳು, ರಸ್ತೆ ಹಾಗೂ ರಸ್ತೆ ವರ್ತುಲಗಳಿಗೆ ನಾಮಕರಣ ಮಾಡುವುದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಅದೆಲ್ಲ ಒಂದು ಘಂಟೆ, ಒಂದು ದಿನದ ಪ್ರಚಾರಕ್ಕೆ ಮುಕ್ತಾಯಗೊಳ್ಳುವಂಥದ್ದು. ಯಾವನೇ ಒಬ್ಬ ಜಿಜ್ಞಾಸು ಆ ‘ಕೋಟಿ ಚೆನ್ನಯ’ ಎಂದರೆ ಏನು ಎಂಥದು ಅಂತ ಯಾರನ್ನಾದರೂ ಕೇಳಿದರೆ ಅದಕ್ಕೆ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ. ಕಾರಣ ಆ ಪುರಾಣ ಪರಿಚಯ ಗೊತ್ತಿರುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಯಾವನೇ ಒಬ್ಬ ಹಿರಿಯ ಪ್ರಜೆ ‘ಕೋಟಿ ಚೆನ್ನಯ’ ಯಾರವರು ಅಂತ ವಿಚಾರಿಸಿ ತಿಳಿಯಬಯಸಿದರೆ ಅದಕ್ಕೆ ಸ್ಪಷ್ಟವಾಗಿ ವಿವರಣೆ ನೀಡುವುದು ಸಾಧ್ಯವಿಲ್ಲವಾಗುತ್ತದೆ. ಪ್ರಾದೇಶಿಕವಾಗಿ ಜನಪದ ಇತಿಹಾಸದಲ್ಲಿ ಮೆರೆದಿರುವ ಅವರನ್ನು ರಾಜ್ಯ ಮಟ್ಟದಲ್ಲೂ ಪ್ರಚಾರದಲ್ಲಿ ತಂದಿಲ್ಲ ಹಾಗಾಗಿ ಗೊತ್ತಿಲ್ಲವಾಗಿರುತ್ತದೆ. ತುಳುನಾಡಿನ ವಿದ್ಯಾವಂತರು, ವಿಚಾರವಂತರು, ತುಳು ಜನಪದ ಸಾಹಿತ್ಯ ವಿದ್ವಾಂಸರು, ಬಿಲ್ಲವರು ಮತ್ತು ತುಳುನಾಡಿನ ಇತರೆಲ್ಲ ಜಾತಿ ಸಮಾಜದವರು ಒಂದಾಗಿ ಕೋಟಿ ಚೆನ್ನಯ ಮಹಾ ಪುರುಷರು ಬದುಕಿ ಬಾಳಿ ಮೆರೆದ ಇತಿಹಾಸ ಮತ್ತು ಜೀವನ ಕಥೆಯನ್ನು ಹೇಳುವ ಪಾಠವನ್ನಾಗಿಸಿ ಪದವಿಗೊ ಅಥವಾ ಸ್ನಾತಕೋತ್ತರ ಪದವಿಗೊ ಅಳವಡಿಸುವಂತೆ ತೀರ್ಮಾನ ಮಾಡಬೇಕು. ಕೋಟಿ ಚೆನ್ನಯರ ಕಥೆಯನ್ನು ಸ್ಪಷ್ಟವಾಗಿ ಬರೆಯುವ, ಹತ್ತಾರು ಬಾರಿ ಅದನ್ನು ಪರಿಶೀಲಿಸುವ ಸಾಹಿತಿಗಳ ತಂಡದವರ ಸಮಿತಿ ರಚಿಸಬೇಕು. ಯಾವುದೇ ತಪ್ಪುಗಳು, ವಿವಾದಾಸ್ಪದ ವಾಕ್ಯಗಳು ಸೇರಿಕೊಳ್ಳದ ಹಾಗೆ ನಿಧಾನವಾಗಿಯಾರೂ ಆ ಕೆಲಸ ಮಾಡಿದರೆ ಕೋಟಿ ಚೆನ್ನಯರ ಪುರಾಣ ಕಥೆಯನ್ನು ರಾಜ್ಯದ ಎಲ್ಲ ಜನತೆಯೂ ಓದಿ ತಿಳಿಯುವಂತಾಗುತ್ತದೆ. ಕರಾವಳಿಯ ಎರಡೂ ಜಿಲ್ಲೆಗಳ ಸಜ್ಜನಶೀಲ ನಾಗರಿಕರು ಈ ವಿಚಾರದತ್ತ ಮನಸು ಕೊಡುವುದರಿಂದ ತುಂಬಾ ನೆಮ್ಮದಿ ಮತ್ತು ಪುರಾಣ ಕಥೆಯೂ ಪ್ರಸಾರಗೊಳ್ಳಲಿರುವುದು.

ನನ್ನ ಬರೆಹ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು