ಶಬರಿಮಲೆ, ನ.10: ಈ ವರ್ಷ ಕೊರೊನಾ ಕಾಟದ ನಡುವೆಯೇ ಎಲ್ಲ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಬರಿಮಲೆ ಯಾತ್ರೆಯೂ ಇದಕ್ಕೆ ಹೊರತಾಗಿಲ್ಲ. ನ.16ರಿಂದ ಪ್ರಾರಂಭವಾಗುವ ಶಬರಿಮಲೆ ಮಂಡಲ ಮತ್ತು ಮಕರ ವಿಳಕ್ಕು ಯಾತ್ರೆಗಾಗಿ ಕೇರಳ ಸರಕಾರ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾತ್ರೆಗೈಯ್ಯುವ ಭಕ್ತರು ಅಗತ್ಯವಾಗಿ ಒಯ್ಯಬೇಕಾದ ವಸ್ತುಗಳ ಹೆಸರುಗಳನ್ನು ಪ್ರಕಟಿಸಿದೆ.
ಮಾರ್ಗಸೂಚಿ ಪ್ರಕಾರ ಶಬರಿಮಲೆ ಯಾತ್ರೆಗೈಯ್ಯಲು ಅವಕಾಶ ಸಿಕ್ಕಿರುವವರು ತಮ್ಮ ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಅನ್ನು ಒಯ್ಯಬೇಕು.ಪದೇಪದೆ ಕೈತೊಳೆದುಕೊಳ್ಳಬೇಕು ಹಾಗೂ ಇದಕ್ಕಾಗಿ ಹ್ಯಾಂಡ್ವಾಶ್ ಜೊತೆಗಿದ್ದರೆ ಉತ್ತಮ.
ಈ ಸಲ ವರ್ಚುವಲ್ ಕ್ಯೂನಲ್ಲಿ ದರ್ಶನ ಕಾದಿರಿಸಿದವರಿಗೆ ಮಾತ್ರ ಯಾತ್ರೆಗೆ ಅನುಮತಿ ನೀಡಲಾಗುತ್ತದೆ. ವಾರದ ದಿನಗಳಲ್ಲಿ 1,000 ಮಂದಿಗೆ ಮತ್ತು ಶನಿವಾರ ಮತ್ತು ಭಾನುವಾರ 2000 ಮಂದಿಗೆ ಮಾತ್ರ ಅಯ್ಯಪ್ಪನ ದರ್ಶನ ಭಾಗ್ಯ ಸಿಗಲಿದೆ. ಈಗಾಗಲೇ ವರ್ಚುವಲ್ ಬುಕ್ಕಿಂಗ್ ಭರ್ತಿಯಾಗಿದೆ. ಹೀಗಾಗಿ ಹೆಚ್ಚಿನ ಅಯ್ಯಪ್ಪ ಭಕ್ತರಿಗೆ ಈ ಸಲ ಯಾತ್ರೆಗೈಯ್ಯಲು ಅವಕಾಶವಿಲ್ಲದಂತಾಗಿದೆ.
ಕೋಟಿಗಟ್ಟಲೆ ಭಕ್ತರು ಜಮೆಯಾಗುವ ಶಬರಿಮಲೆ ಕ್ಷೇತ್ರದಲ್ಲಿ ಕೊರೊನಾ ವೈರಸ್ ಕ್ಷಿಪ್ರವಾಗಿ ಹರಡುವ ಸಾಧ್ಯತೆಯಿರುವುದರಿಂದ ಈ ಸಲ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಯಾತ್ರೆಗೆ ಹೋಗುವವರು 48 ತಾಸು ಮೊದಲು ಕೊರೊನಾ ಪರೀಕ್ಷೆ ಮಾಡಿಸಿಕೊಂಡ ರಿಪೋರ್ಟ್ ಹೊಂದಿರುವುದ ಕಡ್ಡಾಯ. ಕಫ, ಶೀತ, ಜ್ವರ ಸೇರಿ ಅನಾರೋಗ್ಯದ ಯಾವ ಲಕ್ಷಣವಿದ್ದರೂ ನಿರ್ದಾಕ್ಷಿಣ್ಯವಾಗಿ ವಾಪಾಸು ಕಳುಹಿಸಲು ಸರಕಾರ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಶಬರಿಮಲೆಗೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕೊರೊನಾ ಟೆಸ್ಟಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೂಡ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದು.
ಶಬರಿಮಲೆ ಯಾತ್ರೆಗೈಯ್ಯುತ್ತೀರಾ? ಹಾಗಾದರೆ ಈ ವಸ್ತುಗಳನ್ನು ಅಗತ್ಯವಾಗಿ ಒಯ್ಯಿರಿ











