ಉಡುಪಿ, ನ.6: ಮದುವೆ ಸಮಾರಂಭದಲ್ಲಿ 200ಕ್ಕಿಂತ ಹೆಚ್ಚು ಜನರು ಭಾಗವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಸರಕಾರ ಮದುವೆ ಸಮಾರಂಭಗಳಿಗೆ ಅನುಮತಿ ನೀಡಿದ ಬಳಿಕ ಜನರು ಬೇಕಾಬಿಟ್ಟಿಯಾಗಿ ಸಮಾರಂಭಗಳನ್ನು ಆಯೋಜಿಸುತ್ತಿರುವುದು ಗಮನಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ.
ಮದುವೆ ಮಾತ್ರವಲ್ಲದೆ ಅದಕ್ಕೂ ಮೊದಲು ನಡೆಯುವ ನಿಶ್ಚಿತಾರ್ಥ, ಮೆಹಂದಿ ಕಾರ್ಯಕ್ರಮಗಳಲ್ಲಿ ಕೂಡ ಭಾರಿ ಜನ ಸೇರುತ್ತಾರೆ. ಇಲ್ಲಿ ಕೊರೊನಾ ನಿಯಮಗಳ ಪಾಲನೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮದುವೆ ಸಮಾರಂಭಕ್ಕೆ ಪೂರ್ವಭಾವಿಯಾಗಿ ತಹಶೀಲ್ದಾರ್ ಅವರಿಂದ ಅನುಮತಿ ಪಡೆದುಕೊಳ್ಳಬೇಕು. ತಹಶೀಲ್ದಾರ್ ಓರ್ವ ಅಧಿಕಾರಿಯನ್ನು ನಿಯೋಜಿಸಿದ್ದು, ಮದುವೆ ಸಮಾರಂಭದಲ್ಲಿ 200ಕ್ಕಿಂತ ಹೆಚ್ಚು ಜನರು ಸೇರಿದ್ದರೆ ಸಂಬಂಧಪಟ್ಟವರ ವಿರುದ್ಧ ತಹಶೀಲ್ದಾರ್ಗೆ ವರದಿ ಮಾಡುವ ಅಧಿಕಾರ ಈ ಅಧಿಕಾರಿಗಿದೆ. ಈ ವರದಿಯನ್ನು ಆಧರಿಸಿ ತಹಶೀಲ್ದಾರ್ ಕೇಸು ದಾಖಲಿಸುತ್ತಾರೆ.
ಮದುವೆ ಸಮಾರಂಭಕ್ಕೆ 200ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ : ಜಿಲ್ಲಾಧಿಕಾರಿ ಆದೇಶ







































































