ಭೋಪಾಲ, ಅ. 19: ಮಧ್ಯ ಪ್ರದೇಶ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಕಾಂಗ್ರಸ್ ನಾಯಕ, ಮಾಜಿ ಮುಖ್ಯಮಂತ್ರಿ ಕಮಲನಾಥ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಗ್ವಾಲಿಯರ್ನ ದಬ್ರಾ ಪಟ್ಟಣದಲ್ಲಿ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಕಮಲನಾಥ್ ನಮ್ಮ ಅಭ್ಯರ್ಥಿ ಸರಳ ವ್ಯಕ್ತಿ , ಎದುರಾಳಿ ಬಿಜೆಪಿಯ ಐಟಮ್ನಂತೆ ಅಲ್ಲ ಎಂದಿದ್ದರು.
ಈ ಹೇಳಿಕೆ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಸಚಿವರಾದ ನರೋತ್ತಮ್ ಮಿಶ್ರ, ಭೂಪೇಂದ್ರ ಸಿಂಗ್, ವಿಶ್ವಾಸ್ ಸಾರಂಗ್, ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿ ಹಲವು ಬಿಜೆಪಿ ನಾಯಕರು ಇಂದು ಕಮಲನಾಥ್ ಹೇಳಿಕೆಯನ್ನು ಪ್ರತಿಭಟಿಸಿ ವಿವಿಧೆಡೆ ಮೌನವ್ರತ ಮಾಡಿದ್ದಾರೆ. ಶಿವರಾಜ್ ಸಿಂಗ್ ಚೌಹಾನ್ ಇದು ಕಾಂಗ್ರೆಸಿಗರ ವಿಕೃತ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದಿದ್ದಾರೆ.



































































