ಕಾರ್ಕಳ : ಹೊಂಡಗಳಿಂದ ಆವೃತ್ತವಾಗಿರುವ ನಗರದ ರಥಬೀದಿ ರಸ್ತೆಯನ್ನು ಒಳಚರಂಡಿ ಮಂಡಳಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಜಲ್ಲಿ ಹುಡಿ ಸುರಿದು ಗುಂಡಿ ಮುಚ್ಚುವ ಕಾರ್ಯಮಾಡುತ್ತಿದ್ದಾರೆ. ಜಲ್ಲಿ ಹುಡಿ ಗಾಳಿಗೆ ಹಾರಿ ರಥಬೀದಿ ನಿವಾಸಿಗಳ ಆರೋಗ್ಯ ಕೆಡುತ್ತಿದ್ದು, ಶ್ವಾಸಕೋಶದ ಸೋಂಕು ಇತ್ಯಾದಿಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ರಸ್ತೆ ಹೊಂಡ ಮುಚ್ಚಲು ಯಾವುದೇ ಕಾರಣಕ್ಕೂ ಜಲ್ಲಿ ಹುಡಿ ಬಳಸಬಾರದಾಗಿ ಸೆ. 25ರಂದು ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿ ಅವರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
ರಸ್ತೆಯಲ್ಲಿರುವ ಹೊಂಡವನ್ನು ಮುಚ್ಚಲು ಜಲ್ಲಿ ಹುಡಿ ಬಳಸಬಾರದೆಂದು ಮನವಿ ಮಾಡಿಕೊಳ್ಳಲಾಗಿದ್ದು, ಮನವಿಗೆ ಈ ಭಾಗದ ಅಂಗಡಿ ಮಾಲಕರು, ನಿವಾಸಿಗಳು ಸಹಿ ಹಾಕಿರುತ್ತಾರೆ. ಅನೇಕ ಬಾರಿ ಇಂತಹ ಅನುಭವವಾಗಿದ್ದು, ರಾತ್ರಿ ವೇಳೆಯಲ್ಲಿ ಜಲ್ಲಿ ಸುರಿಯಲಾಗುತ್ತಿದೆ ಎಂದು ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ತಿಳಿಸಿದರು.















































































