ವರದಿ : ದಿನೇಶ್ ಕುಲಾಲ್
ಮುಂಬಯಿ, ಆ. 16: ಮುಂಬಯಿಯಲ್ಲಿ ಕರಾವಳಿಯ ಕನ್ನಡಿಗರು ಸ್ಥಾಪಿಸಿರುವ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಚೇರ್ಮನ್ ಆಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ನಿರ್ದೇಶಕ ಮಂಡಳಿ ಸಭೆಯಲ್ಲಿ ನೂತನ ಚೇರ್ಮನ್ ಆಯ್ಕೆ ಮಾಡಲಾಯಿತು.
ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಉಪ್ಪೂರು ಶಿವಾಜಿ ಪೂಜಾರಿಯವರು ರಾಷ್ಟೀಯ ಬ್ಯಾಂಕೊಂದರಲ್ಲಿ ಮಹಾ ಪ್ರಬಂಧಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಇವರು ಭಾರತ್ ಬ್ಯಾಂಕಿನ ನಿರ್ದೇಶಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವರು. ಇವರು ಬಿ.ಎಸ್.ಸಿ., ಎಂ.ಎ. ಸಿಎ ಐ ಐ ಬಿ ಪದವೀಧರರು.

ಬ್ಯಾಂಕಿನ ಕಾಯ್ಯಾಧ್ಯಕ್ಷರಾದ ಜಯ ಸಿ. ಸುವರ್ಣ ಇವರ ಉಪಸ್ಥಿತಿಯಲ್ಲಿ ಬ್ಯಾಂಕಿನ ಕೇಂದ್ರ ಕಾರ್ಯಾಲಯದಲ್ಲಿ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಉಪ್ಪೂರು ಶಿವಾಜಿ ಪೂಜಾರಿ ಯವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಜಯ ಸಿ. ಸುವರ್ಣರ ಅಧಿಕಾರವಧಿಯಲ್ಲಿ ಭಾರತ್ ಬ್ಯಾಂಕ್ ವ್ಯವಹಾರದಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿ ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ 102 ಶಾಖೆಗಳು ಹಾಗೂ ಒಂದು ವಿಸ್ತರಿತ ಶಾಖೆಯನ್ನು ಹೊಂದಿದ ಭಾರತ್ ಬ್ಯಾಂಕ್ 19 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುತ್ತಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ನ್ಯಾಯವಾದಿ ರೋಹಿಣಿ ಸಾಲ್ಯಾನ್, ವಾಸುದೇವ ಆರ್. ಕೋಟ್ಯಾನ್, ಜ್ಯೋತಿ ಕೆ. ಸುವರ್ಣ, ಭಾಸ್ಕರ ಎಂ. ಸಾಲ್ಯಾನ್, ಜಯ ಎ. ಕೋಟ್ಯಾನ್, ನ್ಯಾಯವಾದಿ ಸೋಮನಾಥ ಬಿ. ಅಮೀನ್, ಗಂಗಾಧರ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಎನ್. ಟಿ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಮೋಹನ್ ದಾಸ್ ಎ. ಪೂಜಾರಿ, ಪ್ರೇಮನಾಥ ಪಿ. ಕೋಟ್ಯಾನ್, ಶಾರದಾ ಎಸ್. ಕರ್ಕೇರ, ಅನ್ ಬಲಗನ್ ಸಿ. ಹರಿಜನ್, ರಾಜಾ ವಿ. ಸಾಲ್ಯಾನ್, ಬ್ಯಾಂಕಿನ ಎಂ. ಡಿ. ಹಾಗೂ ಸಿ.ಇ.ಓ. ವಿದ್ಯಾನಂದ ಎಸ್. ಕರ್ಕೇರ ಹಾಗೂ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ನ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದೆ.







