ಗುರು ತೋರಿದ ಮಾರ್ಗದಲ್ಲಿ ನಡೆದ ವಿದ್ಯಾರ್ಥಿಯ ಬದುಕು ಅಧ:ಪತನವಾಗಲಾರದು – ಎನ್. ಆರ್. ದಾಮೋದರ ಶರ್ಮ
ಕಾರ್ಕಳ : ಭಗವಂತನೇ ಧರೆಗಿಳಿದು ಬಂದಾಗ ಅವನಿಗೆ ಮಾರ್ಗದರ್ಶನ ನೀಡಿದ್ದು ಗುರುಗಳು. ಇಂತಹ ಭವ್ಯ ಗುರು ಪರಂಪರೆ ಹೊಂದಿರುವ ಭಾರತದಲ್ಲಿ ಹುಟ್ಟಿದ ನಾವೇ ಧನ್ಯರು. ಗುರು ತೋರಿದ ಮಾರ್ಗದಲ್ಲಿ ನಡೆದ ಯಾವ ವಿದ್ಯಾರ್ಥಿಯೂ ಬದುಕಿನಲ್ಲಿ ಅದಃಪತನಕ್ಕೆ ಹೋಗಲಾರನು. ಜ್ಞಾನಸುಧಾದಲ್ಲಿ ಬದುಕಿನ ಸಾಧನೆಗಳನ್ನು ಶಾಶ್ವತವಾಗಿಸಬಲ್ಲ ಜ್ಞಾನವೆಂಬ ಅಮೃತವನ್ನು ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಿ.. ಮನೋನಿಯಂತ್ರಣದ ಜೊತೆಗೆ ಸಚ್ಚಾರಿತ್ರ್ಯದ ಬದುಕು ನಿಮ್ಮದಾಗಲಿ ಎಂದು ಖ್ಯಾತ ವಾಗ್ಮಿ ಎನ್. ಆರ್. ದಾಮೋದರ ಶರ್ಮರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಹೆತ್ತವರ ಮನಸ್ಸು ನೋಯಿಸದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿಮ್ಮದು. ವನಸುಮದಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಬದುಕ ನಡೆಸಿದ ಎಲ್ಲಾ ಶಿಕ್ಷಕರುಗಳ ಜೀವನಧಾರೆ ನಮಗೆ ಮಾದರಿಯಾಗಲಿ ಎಂದರು.

ಸನ್ಮಾನ
ಕಾರ್ಯಕ್ರಮದಲ್ಲಿ ನಿಟ್ಟೂರು ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುರಳಿ ಕಡೆಕಾರ್, ಕಮಲಾಬಾಯಿ ಪ್ರೌಢ ಶಾಲೆ ಕಡಿಯಾಳಿ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ ಸುದರ್ಶನ್ ನಾಯಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯ ನಿವೃತ್ತ ಶಿಕ್ಷಕಿ ಎಚ್. ಎಮ್. ಯಶೋಧ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತನಗರದ ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ ಎನ್. ಅವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಮುರಳಿ ಕಡೆಕಾರ್ ಮಾತನಾಡಿ, ದೇವರು ಕೊಟ್ಟ ಶ್ರೇಷ್ಠ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಗಣಿತಕ್ಕಾಗಿ ಒಂದು ನಗರವನ್ನು ಕಟ್ಟಿ ಬೆಳೆಸುವ ಶ್ರಮ ಸಾಮಾನ್ಯವಾದುದಲ್ಲ. ವಿದ್ಯಾರ್ಜನೆಗೆ ಬಂದ ನಿಮಗೆ ಡಾ. ಸುಧಾಕರ ಶೆಟ್ಟಿಯವರೇ ಮಾದರಿ ವ್ಯಕ್ತಿತ್ವ ಅವರಂತೆ ಬಾಳಿ ಬದುಕಿ ಎಂದು ಶುಭ ಹಾರೈಸಿದರು.
ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿದರು.

















































































