ಕಾರ್ಕಳ : ನೀರೆ ಗ್ರಾಮದ ಬ್ರಹ್ಮ ಬೈದರ್ಕಳ ಗರಡಿ ರಸ್ತೆಯ ದೇಲಬೆಟ್ಟು ಎಂಬಲ್ಲಿ ದನ ಕಳ್ಳತನ ಪ್ರಯತ್ನವೊಂದನ್ನು ಕಿಶನ್ ಎಂಬವರು ವಿಫಲಗೊಳಿಸಿದ್ದಾರೆ. ಕಿಶನ್ ಭಾನುವಾರ ರಾತ್ರಿ 7.45ರ ವೇಳೆ ಬೈಕಿನಲ್ಲಿ ಹೋಗುತ್ತಿದ್ದಾಗ ದೇಲಬೆಟ್ಟುವಿನಲ್ಲಿ ಐವರು ವಾಹನವೊಂದನ್ನು ನಿಲ್ಲಿಸಿ ಗುಂಪಿನಲ್ಲಿ ಮೇಯುತ್ತಿದ್ದ ಕರುವವೊಂದನ್ನು ವಾಹನಕ್ಕೆ ತುಂಬಿಸಲು ಯತ್ನಿಸುತ್ತಿದ್ದರು. ಕಿಶನ್ ಬೈಕ್ ನಿಲ್ಲಿಸಿ ಹತ್ತಿರ ಹೋಗಿ ನೋಡಿದಾಗ ರವೀಂದ್ರ ಹಾಗೂ ಮೋಹನ್ ನಾಯಕ್ ಎಂಬಿಬ್ಬರು ಅವರ ಪರಿಚಿತರೇ ಆಗಿದ್ದರು. ಉಳಿದ ಮೂವರನ್ನು ಬಾವು ಮಹಮ್ಮದ್ ಅಲಿ, ಮಹಮ್ಮದ್ ಪೈಜಾನ್, ಮಹಮ್ಮದ್ ಅಜಾನ್ ಎಂದು ಗುರುತಿಸಲಾಗಿದೆ. ದನಗಳು ಯಾರದ್ದು, ಏಕೆ ವಾಹನದಲ್ಲಿ ತುಂಬಿಸಲು ಪ್ರಯತ್ನಿಸುತ್ತಿರುವಿರಿ ಎಂದು ಕೇಳಿದಾಗ ಅವರು ಉತ್ತರಿಸಲು ತಡವರಿಸಿದ್ದು, ರವೀಂದ್ರ ಮತ್ತು ಮೋಹನ್ ಓಡಿಹೋಗಿದ್ದಾರೆ. ಉಳಿದ ಮೂವರು ತಾವು ತಂದಿದ್ದ ವಾಹನದಲ್ಲಿ ಪಲಾಯನ ಮಾಡಿದ್ದಾರೆ. ಈ ಕುರಿತು ಕಿಶನ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖರೀದಿ ಮಾಡಿದ ದನ ಸಾಗಿಸುವಾಗ ತಡೆದು ಹಲ್ಲೆ ಎಂದು ಪ್ರತಿದೂರು
ಬಾವು ಮೊಹಮ್ಮದ್ ಅಲಿ ತಾನು ಬಾಡಿಗೆ ವಾಹನ ಚಲಾಯಿಸುತ್ತಿದ್ದು, ಮಹಮ್ಮದ್ ಆಝಾನ್ ನೀರೆಯಲ್ಲಿ ದನ ಖರೀದಿ ಮಾಡಿದ್ದು ತರಲು ಹೋಗುವ ಎಂದು ಹೇಳಿದಾಗ ಮಹಮ್ಮದ್ ಫೈಜಾನ್ ಎಂಬವರ ಜತೆ ಬಾಡಿಗೆಗಾಗಿ ಹೋಗಿದ್ದೆ. ದನಗಳನ್ನು ಹಿಡಿಯುವಾಗ ಸ್ಥಳೀಯರು ಬಂದಿದ್ದು, ಬಳಿಕ ನಾವು ಅಲ್ಲಿಂದ ವಾಪಸು ಹೋಗುವಾಗ ಸಚಿನ್, ಅಶ್ವಥ್, ಮಹೇಶ, ಸುರೇಶ, ಶಿವರಾಜ ಮತ್ತು ಇತರರು ರಸ್ತೆಗೆ ಕಾರು ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಲ್ಲೆ ಮಾಡಿ ದೂಡಿ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.






































































