ಚಿತ್ರದುರ್ಗ : ಮೊಬೈಲ್ ಕೊಡಿಸುವಂತೆ ಅಜ್ಜನಿಗೆ ಬ್ಲ್ಯಾಕ್ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಮ್ಮಗ ಮೃತಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಯಶವಂತ್(20) ಮೃತ ಯುವಕ. ಹೊಸ ಮೊಬೈಲ್ ಕೊಡಿಸುವಂತೆ ಹಠ ಹಿಡಿದಿದ್ದ ಯಶವಂತ್, ಬೆದರಿಸಲೆಂದು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ದುರದೃಷ್ಟವಶಾತ್ ಯಶವಂತ್ ದುರಂತ ಅಂತ್ಯಕಂಡಿದ್ದಾನೆ.
ಅ. 8ರಂದು ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್ ಮೊಬೈಲ್ ಕಳೆದುಕೊಂಡಿದ್ದ. ಆದ್ದರಿಂದ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದ. ಆದರೆ ಅಜ್ಜ ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಹೇಳಿದ್ದರು. ಆದರೆ ಯುವಕ ಈಗಲೇ ಮೊಬೈಲ್ ಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಯಶವಂತ್ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














































































