ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ರಾಮಾಯಣ ಪರೀಕ್ಷೆ
ಹೆಬ್ರಿ : ಹಿಂದು ಧರ್ಮದ ಬಗ್ಗೆ ತಿಳಿಯಲು ಮಕ್ಕಳಿಗೆ ರಾಮಾಯಣದ ಅರಿವು ಅಗತ್ಯ. ರಾಮನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ರಾಮರಾಜ್ಯ ಆಗುವುದರಲ್ಲಿ ಸಂಶಯವಿಲ್ಲ ಎಂದು ವಿದ್ವಾನ್ ಗುಡ್ಡೆಯಂಗಡಿ ರಾಘವೇಂದ್ರ ಭಟ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮರ್ಣೆ, ವರಂಗ, ಪಡುಕುಡೂರು, ಅಂಡಾರು ಗ್ರಾಮಗಳಿಗೊಳಪಟ್ಟ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಮಟ್ಟದಲ್ಲಿ ನಡೆದ ರಾಮಾಯಣ ಪರೀಕ್ಷೆಯ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸಹಕಾರದಿಂದ ಆದಿತ್ಯವಾರ ಪರೀಕ್ಷೆ ನಡೆಯಿತು. ಮುನಿಯಾಲು ಪರಿಸರದ ಸುಮಾರು 250 ಮಕ್ಕಳು ಪರೀಕ್ಷೆಯಲ್ಲಿ ಪಾಲ್ಗೊಂಡರು. ಪರೀಕ್ಷೆ ಬರೆದ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರ, ಪ್ರಥಮ, ದ್ವಿತೀಯ, ತೃತೀಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ದಿನ ಪ್ರಶಸ್ತಿ ಹಾಗೂ ನಗದು ನೀಡಿ ಗೌರವಿಸುವುದಾಗಿ ತಿಳಿಸಿದರು.
ಈ ಪುಣ್ಯಸ್ಥಳದಲ್ಲಿ ಹಲವಾರು ವರ್ಷಗಳಿಂದ ರಾಮಾಯಣ, ಮಹಾಭಾರತ, ಕೃಷ್ಣ ಕಥೆ ಸೇರಿದಂತೆ ಧಾರ್ಮಿಕ ಹಿನ್ನೆಲೆಯುಳ್ಳ ಹಲವಾರು ಪರೀಕ್ಷೆಗಳನ್ನು ಪರಿಸರದ ಶಾಲಾ ಮಕ್ಕಳಿಗೆ ನಡೆಸಿರುವುದಾಗಿ ಸಂಘಟಕರು ತಿಳಿಸಿದರು.
ಶ್ರೀ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಗೋಪಿನಾಥ ಭಟ್, ರಾಮದಾಸ್, ಗಣೇಶ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.