ಯಾಕಾಗಿ ಈ ಬಂದ್..?

ಸದ್ಯ ದೇಶದಾದ್ಯಂತ ಎ. ಪಿ. ಎಂ. ಸಿ. ತಿದ್ದುಪಡಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯಿದೆ ಈ ಎರಡು ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ. ಒಂದಷ್ಟು ಕೃಷಿಕರು ಈ ಎರಡೂ ಕಾಯಿದೆಯನ್ನು ಬೆಂಬಲಿಸಿದರೆ ಮತ್ತೊಂದಿಷ್ಟು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಷಯ ರಾಜಕೀಯ ತಿರುವು ಪಡೆದಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾದ – ಪ್ರತಿವಾದಕ್ಕೆ ವೇದಿಕೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿ – 2020 ಭಾರತವು ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಆದರೆ ಕೃಷಿಯ ಕಡೆ ಒಲವು ಕಡಿಮೆಯಾಗುತ್ತಲಿದೆ. ಸೇವಾ ವಲಯ ಕ್ಷೇತ್ರಗಳತ್ತ ಜನರು ಮುಖ ಹಾಕುತ್ತಿದ್ದಾರೆ ಮತ್ತು ಲಾಭಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಸರ್ಕಾರವು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಮಾಡಲು ಸುಗ್ರೀವಾಜ್ಞೆಯನ್ನು ಹೊರಡಿಸುವುದರ ಮೂಲಕ ಈ ಜಾರಿಗೆ ಮುಂದಾಗಿದೆ ಈ ಕಾಯ್ದೆಯ ಪ್ರಕಾರ ಹಿಂದೆ ಇದ್ದ ಕಾನೂನನ್ನು ಸಡಿಲಗೊಳಿಸಿದೆ 1950-1960 79ಎ /79ಬಿ ಕಾಯ್ದೆಯ ಪ್ರಕಾರವಾಗಿ, ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆಯನ್ನು ಸರ್ಕಾರವು ಮಾಡಿತ್ತು. ಅದರೊಂದಿಗೆ ಕರ್ನಾಟಕ ಭೂಸುಧಾರಣೆ ಕಾಯ್ದೆಯನ್ನು ಜಾರಿ ಮಾಡಿತ್ತು. ಈ ಕಾಯ್ದೆಯು ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂದರೆ ನಗರೀಕರಣದಿಂದಾಗಿ ಸಾಕಷ್ಟು ಭೂಮಿಯು ನಾಶವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಭೂಮಿಯನ್ನು ರಕ್ಷಣೆ ಮಾಡುತ್ತಿತ್ತು. ಅದರೊಂದಿಗೆ ರೈತರು ಮಾತ್ರವೇ ಕೃಷಿಭೂಮಿಯನ್ನು ಖರೀದಿಸಬೇಕು ಎನ್ನುವಂತಹ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬೇರೆಯವರು ಕೃಷಿಭೂಮಿಯನ್ನು ಖರೀದಿಸುವಂತೆ ಇರಲಿಲ್ಲ. ಈ ಮೂಲಕ ಶ್ರೀಮಂತರ ಕೈಯಲ್ಲಿ ಭೂಮಿಯು
ಕೇಂದ್ರೀಕೃತವಾಗಿಬಾರದು ಎನ್ನುವ ಕಾರಣಕ್ಕಾಗಿ ಈ ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸಿತು. ಈ ಹಿಂದೆ ಇದ್ದ ವ್ಯವಸ್ಥೆಯು ಇಂದು ಇಲ್ಲ ಎನ್ನುವ ಕಾರಣಕ್ಕಾಗಿ ಸರ್ಕಾರ ಸಡಿಲಗೊಳಿಸಲು ಮುಂದಾಗಿದೆ. “ಭೂ ಸುಧಾರಣಾ ಕಾಯ್ದೆ 2020” ಪ್ರಕಾರ ಯಾರು ಬೇಕಾದರೂ ಕೃಷಿಭೂಮಿಯನ್ನು ಖರೀದಿಸಬಹುದಾಗಿದೆ. ಈ ಕಾಯ್ದೆಯ ಪ್ರಕಾರ ರೈತರು ತಮ್ಮ ಭೂಮಿಯನ್ನು ತಮ್ಮ ಇಚ್ಚಾನುಸಾರ ಯಾರಿಗೆ ಬೇಕಾದರೂ ನೀಡಬಹುದಾಗಿದೆ. ಇದರಿಂದ ರೈತರು ತಮ್ಮ ಭೂಮಿಯ ಮೇಲಿನ ಹಕ್ಕನ್ನು ಪಡೆದುಕೊಳ್ಳಬಹುದಾಗಿದೆ. ಈ ಕಾಯ್ದೆಗೆ ಒಂದಷ್ಟು ವಿರೋಧಗಳು ಕೂಡ ವ್ಯಕ್ತವಾಗಿದ್ದು, ಈ ಕಾಯ್ದೆ ರೈತರಿಗೆ ಮರಣ ಶಾಸನ ಆಗುತ್ತದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಈ ಕಾಯ್ದೆಯ ಪ್ರಕಾರ ರೈತರಲ್ಲದವರೂ ರೈತರ ಭೂಮಿಯನ್ನು ಖರೀದಿಸಬಹುದಾಗಿದೆ ಹೀಗಾಗಿ ವಿರೋಧ ವ್ಯಕ್ತವಾಗುತ್ತಿದೆ. ಬಂಡವಾಳಶಾಹಿಗಳು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಒಂದಷ್ಟು ರೈತ ಸಂಘಟನೆಗಳು, ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಎ. ಪಿ. ಎಂ. ಸಿ ಕಾಯ್ದೆ – 2020
ಎ. ಪಿ. ಎಂ. ಸಿ ಕಾಯ್ದೆಯೂ ರೈತ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಒಂದಷ್ಟು ರೈತರು ಈ ಕಾಯ್ದೆ ರೈತರಿಗೆ ವರವಾಗಿ ಪರಿಣಮಿಸಿದರೆ, ಇನ್ನೊಂದಿಷ್ಟು ರೈತರು ಈ ಕಾಯ್ದೆ ಬಂಡವಾಳಶಾಹಿಗಳ ಪರ ಇದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಎ. ಪಿ. ಎಂ. ಸಿ ಕಾಯ್ದೆಯ ಪ್ರಕಾರ ರೈತರು ತಾವು ಬೆಳೆದ ಫಸಲನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ತಂದು ಪರವಾನಿಗೆ ಪಡೆದ ವ್ಯಾಪಾರಸ್ತರಿಗೆ ಮಾರಬಹುದಾಗಿದೆ . ಇದರಿಂದ ರೈತರು ಸಾಗಾಣಿಕಾ ವೆಚ್ಚವನ್ನು ತಾವೇ ಭರಿಸಬೇಕಾಗಿ ಬರುತ್ತಿತ್ತು. ಆದರೆ ಪ್ರಸ್ತುತ ಎ. ಪಿ. ಎಂ. ಸಿ ಕಾಯ್ದೆಗೆ ತರಲು ಹೊರಟಿರುವ ತಿದ್ದುಪಡಿಯಿಂದ ರೈತರು ಭರಿಸುತ್ತಿದ್ದ ವೆಚ್ಚಗಳು ಕಡಿಮೆಯಾಗಲಿವೆ. ರೈತರು ಬೆಳೆದ ಬೆಳೆಯನ್ನು ಯಾರು ಬೇಕಾದರೂ ಖರೀದಿಸಬಹುದಾಗಿದೆ. ಇದರಿಂದ ರೈತರು ತಾವು ಬೆಳೆದ ಫಸಲುಗಳಿಗೆ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಿದೆ. ಇನ್ನು ಈ ತಿದ್ದುಪಡಿಗೆ ಒಂದಷ್ಟು ವಿರೋಧಗಳು ವ್ಯಕ್ತವಾಗಿದ್ದು ಈ ಕಾಯ್ದೆ ರೈತರಿಗೆ ಮಾರಕವಾಗಿದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿವೆ, ಬಂಡವಾಳಶಾಹಿಗಳು ರೈತರಿಗೆ ಸರಿಯಾದ ಸಮಯದಲ್ಲಿ ಹಣವನ್ನು ನೀಡಲಾಗುವುದಿಲ್ಲ, ಬಹುರಾಷ್ಟ್ರೀಯ ಬಂಡವಾಳಶಾಹಿಗಳಿಗೆ ಲಾಭ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದಾವೆ. ರೈತ ತಾನು ಬೆಳೆದ ಫಸಲಿಗೆ ಈಗಲೂ ತಾನೇ ಬೆಲೆ ನಿಗದಿ ಮಾಡಲು ಅಸಾಧ್ಯವಾಗುತ್ತದೆ. ಎ. ಪಿ. ಎಂ. ಸಿ. ಗಳು ಮುಚ್ಚುವ ಪರಿಸ್ಥಿತಿ ಎದುರಾಗಲೂಬಹುದು.
ಒಟ್ಟಿನಲ್ಲಿ ಭೂ ಸುಧಾರಣಾ ಮತ್ತು ಎ. ಪಿ. ಎಂ. ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರ ರೈತರನ್ನು ವಿಶ್ವಾಸಕ್ಕೆ ತಂದು ಮುನ್ನಡೆಯಬೇಕಾಗಿದೆ.

ಶಬರೀಶ್ – ಪತ್ರಿಕೋದ್ಯಮ ವಿದ್ಯಾರ್ಥಿ

ಶಬರೀಶ್-ಪತ್ರಿಕೋದ್ಯಮ ವಿದ್ಯಾರ್ಥಿ









































































































error: Content is protected !!
Scroll to Top