ದಿಲ್ಲಿ, ಆ. 1: 21ನೇ ಶತಮಾನದಲ್ಲಿ ನಮ್ಮ ದೇಶ ಎಂಬ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ ಇದು ಬರೀ ನೀತಿಗಳ ಕಡತವಲ್ಲ ಬದಲಾಗಿ 130 ಕೋಟಿ ಜನರ ಆಶೋತ್ತರಗಳ ಪ್ರತಿಬಿಂಬ ಎಂದರು.
21ನೇ ಶತಮಾನ ಜ್ಞಾನದ ಯುಗ. ಕಲಿಕೆ, ಸಂಶೋಧನೆ, ಆವಿಷ್ಕಾರಗಳಿಗೆ ಗಮನ ಹರಿಸಬೇಕಾದ ಕಾಲವಿದು. ಶಿಕ್ಷಣ ನೀತಿಯಲ್ಲಿ ಇರುವುದು ಇದೇ ಆಗಿದೆ ಎಂದು ವಿಡಿಯೊ ಕಾನ್ಫರೆನ್ಸಿಂಗ್ ಭಾಷಣದಲ್ಲಿ ಹೇಳಿದರು.
ಗುಣಮಟ್ಟದ ಶಿಕ್ಷಣಕ್ಕೆ ನಾವು ಆದ್ಯತೆ ಕೊಡುತ್ತಿದ್ದೇವೆ. ಅತ್ಯಂತ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಗುರಿ.
ಶಾಲೆಯ ಅವರಣದಾಚೆಗೆ ಪ್ರಯೋಜನಕ್ಕೆ ಬಾರದ ಸ್ಕೂಲ್ ಬ್ಯಾಗ್ ಶಿಕ್ಷಣದಿಂದ ಬದುಕಿಗೆ ನೆರವಾಗುವ ಶಿಕ್ಷಣದತ್ತ ಶಿಕ್ಷಣ ನೀತಿಯನ್ನು ಬದಲಾಯಿಸುವುದು ನಮ್ಮ ಗುರಿ. ಕಲಿಯುವುದೆಂದರೆ ಜಟಿಲ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮಾತ್ರ ಅಲ್ಲ ಎಂದರು ಮೋದಿ.
ದೇಶದ ಭಾಷಾ ವೈವಿಧ್ಯದ ಬೆಳವಣಿಗೆಗೆ ಅಗತ್ಯವಾಗಿರುವ ಅಂಶಗಳು ಶಿಕ್ಷಣ ನೀತಿಯಲ್ಲಿ ಅವಕಾಶ ಇದೆ. ಇದರಿಂದ ದೇಶದ ಜ್ಞಾನ ಹೆಚ್ಚುವುದು ಮಾತ್ರವಲ್ಲದೆ ಒಗ್ಗಟ್ಟು ಕೂಡ ಹೆಚ್ಚುತ್ತದೆ ಎಂದರು.