ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ

ಬೆಂಗಳೂರು : ರಾಜ್ಯದಲ್ಲಿ ಕಾವೇರಿ ಜಲ ವಿವಾದ ಕಾವೇರಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀಡಿರುವ CWMA ಆದೇಶವನ್ನು ಖಂಡಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಪರಿಹಾರ ಸಿಗಲ್ಲ. ದಯವಿಟ್ಟು ಬಂದ್ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಂದ್‌ನಿಂದ ಪರಿಹಾರ ಸಿಗಲ್ಲ. ಅಖಂಡ ಕರ್ನಾಟಕ ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ’ ಹೀಗಾಗಿ ಆಗಸ್ಟ್‌ 13ರ ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ವಿಚಾರವಾಗಿ ಮಾತನಾಡಿದ ಅವರು, 15 ದಿನಗಳ ಕಾಲ ಕಾವೇರಿ ನೀರು ಬಿಡುವಂತೆ CWMA ಆದೇಶಿಸಿದೆ. ಸಂಕಷ್ಟದ ಕಾಲದಲ್ಲಿ ಇಂತಹ ತೀರ್ಪು ಹೊರಬಿದ್ದಿದೆ. ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಹಾಗಾಗಿ ಹಿಂದಿನ ವರ್ಷ ತಮಿಳುನಾಡಿಗೆ 400ಕ್ಕೂ ಹೆಚ್ಚು ಟಿಎಂಸಿ ನೀರು ಹೋಗಿದೆ. ಸಿಡಬ್ಯುಆರ್‌ಸಿ ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಿದ್ದೆವು ಎಂದರು.

CWMA ಸಭೆಗೆ ಯಾರೂ ಹೋಗಿಲ್ಲ ಅಂತಾ ವಿಪಕ್ಷಗಳು ಆರೋಪಿಸಿವೆ. ನಮ್ಮ ರಾಜ್ಯದ ಪರ ಮೂವರು ಹಿರಿಯ ಅಧಿಕಾರಿಗಳು ಹೋಗಿದ್ದರು. ನೀರು ಬಿಡುಗಡೆಗೆ ಕೆಲ ಸಮಯ ನೀಡುವಂತೆ ಮನವಿ ಮಾಡಿದ್ದೆವು. ತಮಿಳುನಾಡು ಅಧಿಕಾರಿಗಳೂ ಪ್ರಬಲ ವಾದ ಮಂಡಿಸಿದ್ದಾರೆ. ರಾಜ್ಯದ ಪರ ಎಸಿಎಸ್‌ ಗೌರವ್ ಗುಪ್ತಾ ಸಹ ಪ್ರಬಲ ವಾದ ಮಂಡಿಸಿದರು. ನಿಮಗೆ ಹೆಚ್ಚು ನೀರು ಬರುತ್ತಿದೆ ಎಂದು CWMAನವರು ಹೇಳಿದ್ದಾರೆ.

ಇನ್ನು ಹೇಮಾವತಿ ಶೇ.67ರಷ್ಟು ತುಂಬಿದೆ, ಕೆಆರ್‌ಎಸ್‌ 36%, ಹಾರಂಗಿ 95%, ಕಬನಿ 83% ನೀರು ತುಂಬಿದೆ. ಎಲ್ಲರ ಬಳಿಯೂ ಈ ದಾಖಲೆ ಇದೆ. ಆದರೆ ಈಗ ಕೊಟ್ಟಿರುವ ಆದೇಶ ಪ್ರಕಾರ 4.5 ಟಿಎಂಸಿ ನೀರು ಬಿಡಲು ಹೇಳಿದೆ. ಈಗಾಗಲೇ ನಮಗೂ ಒಳಹರಿವು ಬರುತ್ತಿದೆ. ಆದರೂ ನನ್ನ ಮತ್ತು ಸರ್ಕಾರದ ಕರ್ತವ್ಯ ರಾಜ್ಯದ ಹಿತ ಕಾಪಾಡಬೇಕು. ಹಿಂದಿನ ಪರಿಸ್ಥಿತಿ ನಮಗೆ ಗೊತ್ತಿದೆ. ಈ ವರ್ಷವು ಶಾಸಕರ ಸಭೆ ಕರೆದು ಮಾತಾಡಿದ್ದೇನೆ. ರೈತರ ರಕ್ಷಣೆ ನಾವು ಮಾಡಿದ್ದೇವೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದ ಹಿತಕ್ಕೆ ಎಲ್ಲಾ ರೀತಿಯ ರಕ್ಷಣೆಗೆ ನಾವು ಬದ್ಧತೆ ತೋರಿಸಿದ್ದೇವೆ. ಈಗಲೂ ರಾಜ್ಯದ ಹಿತ ಕಾಪಾಡುವ ಬದ್ಧತೆ ನಮಗೆ ಇದೆ ಎಂದಿದ್ದಾರೆ.

ಬೇರೊಂದು ದಿನ ರಾಜ್ಯಕ್ಕೆ ಬರುವಂತೆ ಸಿಎಂ ವಿಜಯ್‌ಗೆ ಡಿಕೆ ಶಿವಕುಮಾರ್​ ಮನವಿ
ತಮಿಳುನಾಡು ಸಿಎಂ ವಿಜಯ್‌ ಆಗಮನದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪತ್ರ ಬರೆದಿದ್ದಾರೆ. ರಾಜ್ಯದ ಸಿಎಸ್‌ಗೆ ತಮಿಳುನಾಡು ಸಿಎಸ್‌ ಪತ್ರ ಬರೆಯುವ ಮೂಲಕ ಆಗಸ್ಟ್‌ 3ರಂದು ತಮಿಳುನಾಡು ಸಿಎಂ ವಿಜಯ್‌ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನೂ ಸಹ ಫೋನ್‌ನಲ್ಲಿ ಅವರೊಂದಿಗೆ ಚರ್ಚಿಸಿದ್ದೇನೆ. ಈಗ ಪರಿಸ್ಥಿತಿ ಸರಿ ಇಲ್ಲ, ಎರಡು ರಾಜ್ಯಗಳಿಗೂ ಒಳ್ಳೇದು ಆಗಬೇಕು. ಇಂತಹ ಸಂದರ್ಭದಲ್ಲಿ ತಮಿಳುನಾಡು ಸಿಎಂ ಬರೋದು ಬೇಡ. ಆಗಸ್ಟ್‌ 3ರ ಬದಲು ಬೇರೊಂದು ದಿನ ಬರುವಂತೆ ಮನವಿ ಮಾಡಿದ್ದೇನೆ. ಸೌಹಾರ್ದಯುತವಾಗಿ ಕಾವೇರಿ ವಿವಾದವನ್ನು ಬಗೆಹರಿಸಬೇಕಿದೆ. ರಾಜ್ಯದ ಹಿತ, ರೈತರ ಹಿತ ಕಾಪಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.





























error: Content is protected !!
Scroll to Top