ಉಡುಪಿ : ಬ್ರಹ್ಮಾವರ ತಾಲೂಕು ಹೊರತುಪಡಿಸಿ ಉಡುಪಿ ಜಿಲ್ಲೆಯ ಉಳಿದ ಎಲ್ಲ ಆರು ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರು ಆ.27ರಂದು ಏಕಕಾಲದಲ್ಲಿ ದಾಳಿ ನಡೆಸಿದ್ದು, ಬಾಕಿ ಕಡತಗಳ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ.
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆದೇಶ ನೀಡಿದ್ದು, ಅದರಂತೆ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಉಡುಪಿ, ಕುಂದಾಪುರ, ಕಾಪು, ಹೆಬ್ರಿ, ಕಾರ್ಕಳ, ಬೈಂದೂರು ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಆರು ತಂಡಗಳು ಏಕಾಕಾಲಕ್ಕೆ ದಾಳಿ ನಡೆಸಿವೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಮತ್ತು ಮಂಗಳೂರಿನ ಇಬ್ಬರು ಡಿವೈಎಸ್ಪಿ, ಉಡುಪಿಯ ಒಬ್ಬರು, ಮಂಗಳೂರಿನ ನಾಲ್ವರು ಹಾಗೂ ಕಾರವಾರದ ಒಬ್ಬರು ಪೊಲೀಸ್ ನಿರೀಕ್ಷಕರ ತಂಡಗಳು ತಾಲೂಕು ಕಚೇರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಲೋಕಾಯುಕ್ತ ಮಂಗಳೂರು ಡಿವೈಎಸ್ಪಿ ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಕಳ ಹಾಗೂ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಹೆಬ್ರಿ ತಾಲೂಕು ಕಚೇರಿಯಲ್ಲಿ ಕಡತ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ತಾಲೂಕು ಕಚೇರಿಯಲ್ಲಿನ ಬಾಕಿ ಕಡತಗಳು, ಕಡತ ವಿಳಂಬ, ಸಾರ್ವಜನಿಕ ಇತರ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಹಲವು ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯು ರಾತ್ರಿಯವರೆಗೂ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆಯಷ್ಟೇ ಬ್ರಹ್ಮಾವರ ತಾಲೂಕು ಕಚೇರಿಗೆ ದಾಳಿ ಮಾಡಿರುವುದರಿಂದ ಈ ಬಾರಿ ಅದನ್ನು ಹೊರತು ಪಡಿಸಿ ಉಳಿದ ಕಚೇರಿಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ.




















