ಕರಾವಳಿಯ ರಾಜಕೀಯದಲ್ಲಿ ಗರಿಗೆದರಿದ ಕುತೂಹಲ
ಶಿವಮೊಗ್ಗ : ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ‘ಪುತ್ತಿಲ ಪರಿವಾರ’ ನಾಯಕರು ಶಿವಮೊಗ್ಗದ ನಿವಾಸಕ್ಕೆ ತೆರಳಿ ಭೇಟಿ ಮಾಡಿರುವ ಬೆಳವಣಿಗೆ ಕರಾವಳಿಯ ರಾಜಕೀಯದಲ್ಲಿ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.
ಈ ಭೆಟಿಯಲ್ಲಿ ಅರುಣ್ ಪುತ್ತಿಲ ಇಲ್ಲದಿದ್ದರೂ ಪುತ್ತಿಲ ಪರಿವಾರದ ಪ್ರಮುಖ ನಾಯಕರು ಭೇಟಿ ಮಾಡಿ ಶುಭಕೋರಿದ್ದಾರೆ. ಇದು ಔಪಚಾರಿಕ ಭೇಟಿ ಎನ್ನಲಾಗುತ್ತಿದ್ದರೂ ಹೊಸ ರಾಜಕೀಯ ಬೆಳವಣಿಗೆಗ ನಾಂದಿಯಾಗುವ ಸಾಧ್ಯತೆಯೊಂದು ಗೋಚರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ’ಪುತ್ತಿಲ ಪರಿವಾರ’ ನಾಯಕರು ಇದೀಗ ವಿಜಯೇಂದ್ರರನ್ನು ಭೇಟಿ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾಡ್ತಾ ನೇತೃತ್ವದ ತಂಡದಲ್ಲಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಸುಧೀಶ್ ಶೆಟ್ಟಿ ಕಂಪ ಮತ್ತಿತರರಿದ್ದರು. ಭೇಟಿ ವೇಳೆ ವಿಜಯೇಂದ್ರರಿಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದ ನಾಯಕರು, ಪುತ್ತೂರಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅರುಣ್ ಪುತ್ತಿಲಗೆ ಬಿಜೆಪಿಯಲ್ಲಿ ಸ್ಥಾನಮಾನಗಳ ಬಗ್ಗೆ ಹೆಚ್ಚು ಚರ್ಚೆ ನಡೆಸದ ವಿಜಯೇಂದ್ರ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುವ ಭರವಸೆ ನೀಡಿದ್ದಾರೆನ್ನಲಾಗಿದೆ. ದ.ಕ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್ ಪುತ್ತಿಲ ಸಹ ವಿಜಯೇಂದ್ರ ಭೇಟಿಯಾಗಲಿದ್ದಾರೆ ಎಂದು ಪರಿವಾರದ ನಾಯಕರು ಈ ವೇಳೆ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪುತ್ತೂರು ಟಿಕೆಟ್ ಸಿಗದ ಸಿಟ್ಟಿನಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಹೈಕಮಾಂಡ್ ಮನವೊಲಿಸುವ ಯತ್ನ ನಡೆಸಿದರೂ ಬಗ್ಗಿರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ಆರುಣ್ ಪುತ್ತಿಲ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಅಪೇಕ್ಷೆ ಅರುಣ್ ಪುತ್ತಿಲ ಹೊಂದಿದ್ದಾರೆ. ಇತ್ತ ನಳಿನ್ ಕುಮಾರ್ ಕಟೀಲು ಅವರೂ ಬೇರೆಯವರಿಗೆ ಟಿಕೆಟ್ ನೀಡಿದರೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ. ಸಂಧಾನ ಯಶಸ್ವಿಯಾಗಿ ಪುತ್ತಿಲ ಮರಳಿ ಬಿಜೆಪಿ ಪಾಳಯಕ್ಕೆ ಬಂದರೆ ಕರಾವಳಿಯಲ್ಲಿ ಬಿಜೆಪಿ ನಿರಾಂತಕವಾಗುತ್ತದೆ ಎಂಬ ಭಾವನೆ ಕಾರ್ಯಕರ್ತರಲ್ಲಿದೆ.






































































