ಜೆಡಿಎಸ್ಗೆ ಸಾಮೂಹಿಕ ರಾಜೀನಾಮೆ ನೀಡುವ ಕುರಿತು ಚಿಂತನೆ
ಬೆಂಗಳೂರು: ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾ ದಳ ಲೋಕಸಭೆ ಚುನಾವಣೆಗಾಗಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸೆರಿರುವುದು ಜೆಡಿಎಸ್ನಲ್ಲಿರುವ ಮುಸ್ಲಿಂ ಮುಖಂಡರನ್ನು ಉಭಯಸಂಕಟಕ್ಕೀಡುಮಾಡಿದೆ.
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಅಸಮಾಧಾನಗೊಂಡಿರುವ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಇದೀಗ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ನಗರದಲ್ಲಿ ನಿನ್ನೆ ಜೆಡಿಎಸ್ ಅಲ್ಪಸಂಖ್ಯಾತ ನಾಯಕರ ಸಭೆ ನಡೆದಿದ್ದು, ಮುಸ್ಲಿಂ ಮುಖಂಡರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಜೆಡಿಎಸ್ ಕಾರ್ಯಾಧ್ಯಕ್ಷ ಎನ್.ಎಂ ನಬಿ, ಮುಖಂಡರಾದ ಮೋಹಿದ್ ಅಲ್ತಾಫ್, ನಾಸೀರ್ ಉಸ್ತಾದ್, ವಕ್ತಾರ ನೂರ್ ಅಹಮ್ಮದ್ ಸೇರಿದಂತೆ ದಾವಣಗೆರೆ, ಮೈಸೂರು, ರಾಮನಗರ, ರಾಯಚೂರು, ತುಮಕೂರು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಮಾತನಾಡಿದ ಜೆಡಿಎಸ್ ನಾಯಕ ಎನ್.ಎಂ ನಬಿ, ಎನ್ಡಿಎ ಸೇರುವ ಪಕ್ಷದ ನಾಯಕರ ನಿರ್ಧಾರದಿಂದ ನಮಗೆ ನೋವಾಗಿದೆ. ಈ ಸಮಯದಲ್ಲಿ, ನಾವು ಮುಸ್ಲಿಂ ನಾಯಕರಿಂದ ಮಾತ್ರವಲ್ಲದೆ ಸಮಾನ ಮನಸ್ಕ ಜಾತ್ಯತೀತ ನಾಯಕರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಬಿಜೆಪಿ ಜೊತೆ ಕೈ ಜೋಡಿಸುವ ನಿರ್ಧಾರ ನಮಗೆ ನೋವು ತಂದಿದೆ. ಹೀಗಾಗಿ ನಮಗೆ ಪಕ್ಷವನ್ನು ಬಿಡದೆ ಬೇರೆ ದಾರಿ ಇಲ್ಲ ಎಂದು ಹೇಳಿದರು.














































































