ಕಾಂಗ್ರೆಸ್ ವಕ್ತಾರ ಶುಭದ್ ರಾವ್ ವಿರುದ್ಧ ಆಕ್ರೋಶ
ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ಯಾವುದೇ ಒಳ್ಳೆಯ ಕೆಲಸವಾದರೂ ಅದನ್ನು ಟೀಕಿಸಿ ಅವಹೇಳನ ಮಾಡುವುದರಲ್ಲಿ ನೀವು ಮೊದಲಿಗರು. ಬಿಟ್ಟಿ ಪ್ರಚಾರ ಪಡೆಯುವುದರಲ್ಲಿ ನಿಸ್ಸೀಮರಾಗಿರುವ ನಿಮ್ಮಿಂದ ಇನ್ನೇನು ಕಾರ್ಕಳದಲ್ಲಿ ನಿರೀಕ್ಷಿಸಲು ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ವಿರುದ್ಧ ಸುಮಿತ್ ಶೆಟ್ಟಿ ಕೌಡೂರು, ಪ್ರಶಾಂತ್ ಶೆಟ್ಟಿ ಬೈಲೂರು ಹಾಗೂ ಮಹೇಶ್ ಶೆಣೈ ಬೈಲೂರು ಹರಿಹಾಯ್ದಿದ್ದಾರೆ.
ಕಾರ್ಕಳಕ್ಕೆ ಕಳಂಕ
ಕಾರ್ಕಳದ ಯಾವುದೇ ಅಭಿವೃದ್ದಿಯನ್ನು ನೀವು ಯಾವತ್ತೂ ಸಹಿಸಿದವರಲ್ಲ. ಈ ಹಿಂದೆ ಕಾರ್ಕಳದ ಬಿಳಿಬೆಂಡೆ ಬ್ರಾಂಡ್ ಮಾಡಲು ಹೊರಟಾಗ ರಸ್ತೆಯಲ್ಲಿ ಬೆಂಡೆ ಗಿಡ ನೆಟ್ಟು ಇಡೀ ಕಾರ್ಕಳದ ರೈತರನ್ನು, ಬೆಳೆಯನ್ನು ಅವಮಾನಿಸಿದ ಹೀನ ಮನಸ್ಸಿನ ವ್ಯಕ್ತಿ ನೀವು. ಸ್ವಚ್ಛ ಕಾರ್ಕಳ ಮಾಡಲು ಹೊರಟಾಗ ಅಪಪ್ರಚಾರ ನಡೆಸಿ ಕೊಳಕು ಪ್ರದರ್ಶನ ತೋರಿದಿರಿ. ಯುಜಿಡಿ ಯೋಜನೆ, ಕಾರ್ಕಳ ಉತ್ಸವ, ಜವಳಿ ಪಾರ್ಕ್ ಹೀಗೆ ಜನರಿಗಾಗಿ ತಂದ ಯೋಜನೆಗಳನ್ನು ಟೀಕಿಸುವ ಮಾನಸಿಕ ಅಸ್ವಸ್ಥ ವ್ಯಕ್ತಿಯಂತೆ ವರ್ತಿಸುವ ನೀವು ಚಿಲ್ಲರೆ ಕಾಸಿನ ಗಿರಾಕಿ ಎನ್ನುವುದು ಯಾವತ್ತೋ ಸಾಬೀತಾಗಿದೆ. ಪ್ರತಿ ಅಭಿವೃದ್ಧಿಯನ್ನು ವಿರೋಧಿಸುತ್ತ ಬೀದಿ ನಾಟಕ ಮಾಡುವ ನಿಮ್ಮಂತವರು ಕಾರ್ಕಳ ಅಭಿವೃದ್ಧಿಗಷ್ಟೆ ಅಲ್ಲ ಕಾರ್ಕಳಕ್ಕೆ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಶರ್ ಮರುಸ್ಥಾಪನೆಗೆ ಅವಕಾಶ ನೀಡೆವು
ಪರಶುರಾಮ ಥೀಂ ಪಾರ್ಕ್ ಗೋಮಾಳ ಜಾಗದಲ್ಲಿದೆ ಎಂದು ಅಬ್ಬರದ ಪ್ರಚಾರ ನಡೆಸುವ ನೀವು ಪ್ರವಾಸೋದ್ಯಮ ಉದ್ದೇಶದಿಂದ ಪ್ರವಾಸಿ ತಾಣವಾಗಿ ಮಾಡಲು ಹೊರಟಾಗ ಅಲ್ಲಿಯೂ ನಿಮ್ಮ ವಿಕೃತ ಭಾವನೆ ತೋರಿಸಲು ಹೊರಟಿರುವಿರಿ. ಪರಶುರಾಮ ಥೀಂ ಪಾರ್ಕ್ನ್ನು ಪ್ರವಾಸಿ ತಾಣವಾಗಿಸುವುದಕ್ಕೆ ಸಹಕರಿಸುವ ಬದಲು ಅಲ್ಲಿ ಈಗಾಗಲೇ ಸ್ಥಗಿತಗೊಳಿಸಲಾದ ಕ್ರಶರ್ ಒಂದನ್ನು ಮರುಸ್ಥಾಪಿಸಿ ಪಾಲುದಾರನಾಗುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಆರೋಪಿಸಿರುವ ಅವರು ನಿಮ್ಮ ನಾಯಕನ ಕನಸಿನ ಕ್ರಶರ್ಗೆ ಅವಕಾಶ ನೀಡೆವು ಎಂದು ಸವಾಲೆಸೆದಿದ್ದಾರೆ.
ತನಿಖೆ ನಡೆಸಿ
ನಿಮ್ಮ ಹಗಲು ನಾಟಕದ ಬಗ್ಗೆ ಕಾರ್ಕಳದ ಪ್ರತಿ ಜನತೆಗೂ ತಿಳಿದಿದೆ. ಪರಶುರಾಮ ಥೀಂ ಪಾರ್ಕ್ನಲ್ಲಿ ಸರಕಾರದ ಅನುದಾನ ದುರುಪಯೋಗವಾಗಿದ್ದರೆ ತನಿಖೆ ನಡೆಸಿ ನಿಮ್ಮದೆ ಸರಕಾರವಿದೆ. ಸಾಧ್ಯವಿದ್ದರೆ ಕಾಮಗಾರಿ ಮುಂದುವರಿಕೆಗೆ ಸಹಕರಿಸಿ, ಅದನ್ನು ಬಿಟ್ಟು ಬಿಟ್ಟಿ ಪ್ರಚಾರಕ್ಕಾಗಿ ಕಾರ್ಕಳದ ಗರಿಮೆಗೆ ಮಸಿ ಬಳಿಯಬೇಡಿ. ಮೊದಲು ನಿಮ್ಮ ಚಟವಾಗಿರುವ ಬೀದಿ ರಂಪಾಟ ನಿಲ್ಲಿಸಿ. ನಿಮ್ಮ ದುಷ್ಟ ಮನಸ್ಥಿತಿಯನ್ನು ಬದಲಾಯಿಸಿ ಶುದ್ಧಪಡಿಸಿಕೊಳ್ಳಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.