ಕಾರ್ಕಳ : ವಿದ್ಯಾರ್ಥಿ ಜೀವನದಲ್ಲೂ ಅನೇಕ ಏಳು-ಬೀಳು ಎದುರಾಗುವುದು. ಅಚಲ ಆತ್ಮವಿಶ್ವಾಸ, ನಿರ್ದಿಷ್ಟ ಗುರಿ, ನಿರಂತರ ಅಧ್ಯಯನದಿಂದ ಗೆಲುವನ್ನು ನಮ್ಮದಾಗಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೇ ಮುಖ್ಯವಾದುದು. ಶಿಸ್ತು, ಮೌಲ್ಯಾಧಾರಿತ ಜೀವನ ಶೈಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಬಂಗಾರವಾಗುವುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡ ಹೇಳಿದರು.
ಅವರು ಸೆ. 5ರಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜರುಗಿದ ಗುರುದೇವೋಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತಸದ ವಿಚಾರ
ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಅದರೊಂದಿಗೆ ಗುರುದೇವೋಭವ ಕಾರ್ಯಕ್ರಮ ಆಯೋಜಿಸಿ ಸಾಧಕ ಶಿಕ್ಷಕರನ್ನು ಗುರುತಿಸುವ ಕಾರ್ಯವಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್. ಎಲ್. ಅಭಿಪ್ರಾಯಪಟ್ಟರು.

ಗುರುವಿನ ಅನುಗ್ರಹ ಮುಖ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ವಾನ್ ಗಣಪತಿ ಭಟ್, ಗುರುಕುಲ ಪದ್ಧತಿ ಹೊಂದಿರುವುದು ಭಾರತೀಯ ಸಂಸ್ಕೃತಿ. ನಿರ್ದಿಷ್ಟವಾದ ಗುರಿಯ ಕಡೆಗೆ ನಡೆಯಲು ಗುರುವಿನ ಅನುಗ್ರವಿದ್ದರೆ ಮಾತ್ರ ಸಾಧ್ಯ. ಶಿಷ್ಯನಿಗೆ ಬದುಕಿನ ಪಾಠ ತಿಳಿಸಿಕೊಟ್ಟು ಲೋಕಕ್ಕೆ ಬೆಳಕಾಗುವಂತೆ ವಿದ್ಯಾರ್ಥಿಯನ್ನು ರೂಪಿಸುವುದೇ ನಿಜವಾದ ಶಿಕ್ಷಕನ ಕಾರ್ಯವೆಂದರು.

ಗೌರವಾರ್ಪಣೆ
ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಬಿ. ಪದ್ಮನಾಭ ಗೌಡ, ಚೇತನ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಶೆಟ್ಟಿ, ಸಂಸ್ಥೆಯ ಉಪನ್ಯಾಸಕರಾದ ವಿನಾಯಕ ಜೋಗ್ ಮತ್ತು ಆದಂ ಶೇಖ್ ಅವರನ್ನು ಸಂಸ್ಥೆಯ ಪರವಾಗಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರಾದ ಅಮೃತ್ ರೈ, ವಿಮಲ್ ರಾಜ್ ಜಿ. ಆದರ್ಶ್ ಎಂ. ಕೆ., ಗಣನಾಥ ಶೆಟ್ಟಿ ಮತ್ತು ಗಣಪತಿ ಕೆ. ಎಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಲೋಹಿತ್ ಎಸ್. ಕೆ. ನಿರೂಪಿಸಿ, ವಂದಿಸಿದರು.