ಖರ್ಗೆಯವರ ಹೇಳಿಕೆ ಕಾಂಗ್ರೆಸ್‌ ಸಂಸ್ಕೃತಿಯ ಪ್ರತೀಕ – ಸುನಿಲ್‌ ಕುಮಾರ್‌

ಗಾಂಧಿ ಕುಟುಂಬವನ್ನು ಓಲೈಸಲು ಕಾಂಗ್ರೆಸ್‌ ನೀಡುತ್ತಿರುವ ಹೇಳಿಕೆ ಖಂಡನೀಯ

ಏ. 30 ರಂದು ಬಿಜೆಪಿ ಮಹಾಸಂಪರ್ಕ ಅಭಿಯಾನ

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ನೀಡಿರುವ ವಿಷ ಸರ್ಪ ಹೇಳಿಕೆ ಕಾಂಗ್ರೆಸ್‌ನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪ್ರಧಾನ ಮಂತ್ರಿಗಳ ಕುರಿತು ಈ ರೀತಿಯಾದ ಹೇಳಿಕೆ ನೀಡುವುದು ನಾಗರೀಕ ಸಮಾಜಕ್ಕೆ ಸಲ್ಲಿಸುವ ಅಗೌರವ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್‌ನ ಮನಸ್ಸು, ನಡವಳಿಕೆ ಮತ್ತು ಅವರು ನೀಡುವ ಭರವಸೆಗಳು ವಿಷವಾಗಿದ್ದು, ಈ ರೀತಿಯ ವಿಷಪೂರಿತ ಮನಸ್ಸುಗಳಿಂದ ಮಾತ್ರ ಪ್ರಧಾನ ಮಂತ್ರಿಗಳನ್ನು ವಿಷಸರ್ಪ ಎನ್ನಲು ಸಾಧ್ಯ. ನರೇಂದ್ರ ಮೋದಿ ಜಗತ್ತಿನ ಸರ್ವ ಶ್ರೇಷ್ಠ ನಾಯಕ. ತಮ್ಮ ಆಡಳಿತ ವೈಖರಿ ಮೂಲಕ ದೇಶದ ಜನರ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದವರು ಅವರು. ತಮ್ಮ ರಾಜಕಾರಣಗೋಸ್ಕರ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಕಾಂಗ್ರೆಸ್‌ ನೀಡುತ್ತಿರುವ ಹೇಳಿಕೆಯನ್ನು ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಾಂಗ್ರೆಸ್‌ ಹೇಳಿಕೆ ನೀಡುತ್ತಿರುವುದು ಇದು ಮೊದಲನೆ ಬಾರಿಯಲ್ಲ. ಈ ಹಿಂದೆ ಸೋನಿಯಾ ಗಾಂಧಿಯವರು ಪ್ರಧಾನಿ ಮಂತ್ರಿಗಳ ಕುರಿತು ಮೌತ್‌ ಕಾ ಸೌದಾಗರ್‌ ಮತ್ತು ಸಿದ್ಧರಾಮಯ್ಯ ಮೋದಿಯವರನ್ನು ನರಹಂತಕ ಎಂದು ಹೇಳಿದ್ದರು. ಈ ರೀತಿ ಪದೇ ಪದೇ ಪ್ರಧಾನ ಮಂತ್ರಿಗಳ ಕುರಿತು ಕಾಂಗ್ರೆಸ್‌ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಅವಮಾನಿಸುತ್ತಿದೆ ಎಂದು ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಕುಟುಂಬದ ಕೃಪಾಟಕಾಕ್ಷ
ಕಾಂಗ್ರೆಸ್‌ ಇನ್ನೂ ಗಾಂಧಿ ಕುಟುಂಬದ ಕೃಪಾಕಟಾಕ್ಷದಲ್ಲೇ ಬದುಕುತ್ತಿದೆ. ನಾಮ್ಕಾವಸ್ಥೆ ಖರ್ಗೆ ಪಕ್ಷದ ಅಧಕ್ಷರಾಗಿದ್ದು, ಗಾಂಧಿ ಕುಟುಂಬದವರೇ ಅಧಿಕಾರ ಚಲಾಯಿಸುತ್ತಿದ್ದಾರೆ. ಖರ್ಗೆಯವರು ತಮ್ಮ ಭಾಷಣದ ಮೂಲಕ ಗಾಂಧಿ ಕುಟುಂಬವನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಖರ್ಗೆಯವರಂತಹ ಹಿರಿಯ ರಾಜಕಾರಣಿ ಗಾಂಧಿ ಕುಟುಂಬವನ್ನು ಓಲೈಸಲು ಪ್ರಧಾನ ಮಂತ್ರಿಗಳ ಕುರಿತು ಈ ರೀತಿಯಾಗಿ ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದರು.

ಕುಂಕುಮ ವಿರೋಧಿಗಳಿಗೆ ದೇಶದ ಬಗ್ಗೆ ಗೌರವಿರಲು ಸಾಧ್ಯವಿಲ್ಲ
ಖರ್ಗೆಯವರು ತಮ್ಮ ಹಣೆಯಲ್ಲಿದ್ದ ಕುಂಕುಮವನ್ನು ಅಳಿಸಿರುವಂತಹದ್ದು ಕಾಂಗ್ರೆಸ್‌ನ ಮಾನಸಿಕತೆ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಜನರ ಕುಂಕುಮವನ್ನು ಅಳಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಬಗ್ಗೆ ಜನ ಎಚ್ಚೆತ್ತುಕೊಳ್ಳುವುದು ಅವಶ್ಯ. ಈ ಹಿಂದೆ ಸಿದ್ದರಾಮಯ್ಯನವರು ಕುಂಕುಮ ಹಾಕಿಕೊಂಡು ಬರುವವರು ನನ್ನ ಮುಂದೆ ಇರಬಾರದು, ಕುಂಕುಮ ಅಲರ್ಜಿ ಎಂದು ಉಲ್ಲೇಖಿಸಿದ್ದರು. ಹಿಂದೂ ಪದ ಅಶ್ಲೀಲ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹೇಳಿದ್ದರು. ಇದೆಲ್ಲವೂ ಕಾಂಗ್ರೆಸಿನ ಸಂಸ್ಕೃತಿ ಎಂದು ಸುನಿಲ್‌ ಹೇಳಿದರು.

ಏ. 30ರಂದು ಮಹಾಸಂಪರ್ಕ ಅಭಿಯಾನ
ಏ. 30 ರಂದು ಕಾರ್ಕಳದಲ್ಲಿ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮಹಾ ಸಂಪರ್ಕ ಅಭಿಯಾನ ನಡೆಯಲಿದ್ದು, ಅಂದು 209 ಬೂತ್‌ಗಳಲ್ಲಿ ಏಕಕಾಲದಲ್ಲಿ ಕಾರ್ಯಕರ್ತರಿಂದ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ. ಬೂತ್‌ನಲ್ಲಿರುವ ಕಾರ್ಯಕರ್ತರು, ಬಿಜೆಪಿ ಹಿತೈಷಿಗಳು ಈ ಅಭಿಯಾನದಲ್ಲಿ ಭಾಗಿಯಾಗಬೇಕೆಂದು ಅವರು ವಿನಂತಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನರಸಿಂಹ ಕಾಮತ್‌ ಸಾಣೂರು ಪತ್ರಿಕಾಗೋಷ್ಠಿಯಲ್ಲಿದ್ದರು.





































































































































error: Content is protected !!
Scroll to Top