
ಬೆಂಗಳೂರು, ಅ. 30 : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚಾಗಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿರುವುದೇ ಕಾರಣ ಎಂದಿದೆ ಕೇಂದ್ರದ ತಂಡ.
ದೇಶದಲ್ಲಿ ಕೊರೊನಾ ಪ್ರಕರಣ ಅಧಿಕವಿರುವ ಐದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗೆ ತಜ್ಞರ ತಂಡವನ್ನು ರವಾನಿಸಿತ್ತು. ರಾಜ್ಯದ ಕೊರೊನಾ ನಿಭಾವಣೆಯನ್ನು ಅವಲೋಕಿಸಿರುವ ಈ ತಂಡ ಹಲವು ಲೋಪದೋಷಗಳನ್ನು ಗುರುತಿಸಿದೆ. ತಜ್ಞರ ತಂಡದ ವರದಿಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ನೀಡಲಾಗಿದೆ.
ಇತ್ತೀಚೆಗಿನ ದಿನಳಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಪರ್ಕಿತರನ್ನು ಪತ್ತೆ ಹಚ್ಚಲು ನಡೆಸಿದ ಪ್ರಯತ್ನಗಳು ಏನೇನೂ ಸಾಲದು. ಜೂನ್ ಅಂತ್ಯದ ತನಕ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸವನ್ನು ಸಮರ್ಪಕವಾಗಿ ನಡೆಸಲಾಗಿತ್ತು. ಅನಂತರ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಕೊರೊನಾ ಪ್ರಕರಣಗಳು ಹೆಚ್ಚಾದವು ಎಂದು ವರದಿಯಲ್ಲಿ ಹೇಳಲಾಗಿದೆ.
ಕೊರೊನಾ ರೋಗಿಗಳ ಸಮರ್ಪಕ ದಾಖಲೆಗಳನ್ನು ಇಡುವಲ್ಲಿ ಸರಕಾರ ವಿಫಲಗೊಂಡಿದೆ. ಕೊರೊನಾ ಲಕ್ಷಣ ಇಲ್ಲದೆ ಮೃತಪಟ್ಟ ಹಲವು ಪ್ರಕರಣಗಳನ್ನು ಸರಕಾರ ಕೊರೊನಾ ಪ್ರಕರಣಗಳ ಜೊತೆಗೆ ಸೇರಿಸಿಲ್ಲ. ಹೀಗೆ ಕೊರೊನಾ ನಿಭಾವಣೆಯಲ್ಲಿ ಹಲವು ವೈಫಲ್ಯಗಳು ಆಗಿವೆ ಎಂದು ವರದಿ ಬೆಟ್ಟು ಮಾಡಿ ತೋರಿಸಿದೆ.