ಬೆಂಗಳೂರು, ಆ. 27: ಗ್ರಾಮ ಪಂಚಾಯತ್ ಚುನಾವಣೆಗಾಗಿ ಕಾಯುತ್ತಿರುವವರಿಗೊಂದು ಶುಭ ಸುದ್ದಿ. ರಾಜ್ಯ ಚುನಾವಣಾ ಆಯೋಗ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಬಗ್ಗೆ ಚಿಂತಿಸುತ್ತಿದೆ. ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಚುನಾವಣೆ ನಡೆಸು ಕೆಲವು ಸಿದ್ಧತೆಗಳನ್ನು ಮಾಡಬೇಕಿರುವುದರಿಂದ ವರ್ಷಾಂತ್ಯಕ್ಕಷ್ಟೇ ಚನಜಾವಣೆ ನಡೆಸಲು ಸಾಧ್ಯವಾಗಬಹುದು ಎಂದು ಆಯೋಗದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿರುವ 6025 ಗ್ರಾಮ ಪಂಚಾಯತ್ಗಳ ಅವಧಿ ಜೂನ್/ ಜುಲೈ ತಿಂಗಳಿಗೆ ಅಂತ್ಯವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಸಾಧಾರಣ ಪರಿಸ್ಥಿತಿ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಪಂಚಾಯತ್ ಚುನಾವಣೆಯನ್ನು ಮೇ ತಿಂಗಳಲ್ಲಿ ಮುಂದೂಡಿತ್ತು.
ಈ ಮಧ್ಯೆ ಚುನಾವಣೆ ಮುಂದೂಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಗಾಗಿ 21 ಜಿಲ್ಲೆಗಳಲ್ಲಿ ಮೀಸಲಾತಿ ಪಟ್ಟಿ ಸಿದ್ಧವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗ ಇತ್ತೀಚಿಗೆ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. ಉಳಿದಿರುವ 9 ಜಿಲ್ಲೆಗಳ ಮೀಸಲಾತಿ ಪಟ್ಟಿಗಾಗಿ ಸಮಯವನ್ನು ಕೋರಿತ್ತು.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚುನಾವಣೆ ಬಗ್ಗೆ ಇನ್ನೂ ಖಚಿತ ನಿರ್ಧಾರವಾಗಿಲ್ಲ. ಕೇಂದ್ರದ ಸೂಚನೆ ಪ್ರಕಾರ ಮಾರ್ಗಸೂಚಿಗಳನ್ನು ರೂಪಿಸುತ್ತೇವೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು ವರ್ಷಾಂತ್ಯಕ್ಕೆ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ತಿಳಿಸಿದ್ದಾರೆ.
ಮತದಾನ ನಡೆಯುವ ಕಡೆಗಳಲ್ಲಿ ಸುರಕ್ಷತೆಯನ್ನು ಕೈಗೊಳ್ಳಬೇಕಾಗಿದ್ದು, ಹಣದ ಅಗತ್ಯವಿದೆ.ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲಿಯೇ ಪತ್ರ ಬರೆಯಲಾಗುವುದು,ಪ್ರತಿ ಮತಗಟ್ಟೆಗೆ ಇಂತಿಷ್ಟು ಎಂಬಂತೆ ಮತದಾರರ ಪ್ರಮಾಣವನ್ನು ನಿರ್ಬಂಧಿಸಬೇಕಾಗಿದೆ.ಈ ಎಲ್ಲ ಪ್ರಕ್ರಿಯೆಗಳು ಆರಂಭವಾಗಿದ್ದು . ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗಬಹುದು. ಹೀಗಾಗಿ ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿದೆ.


































































