ಸಂಪಾದಕೀಯ – ರೈನಾ ರೈಸಲು ಇನ್ನೂ ಬಾಕಿಯಿತ್ತು…

ಧೋನಿಯ ಗೆಳೆತನಕ್ಕಾಗಿ ಆತನೊಂದಿಗೆ ನಿವೃತ್ತಿ ಘೋಷಣೆ ಮಾಡಿದ  ಸುರೇಶ್‌ ರೈನಾ ಅವಸರದ ನಿರ್ಧಾರ ಮಾಡಿದರೋ ಎಂದನಿಸುತ್ತಿದೆ. ಅವರಿಗಿನ್ನೂ 33 ವರ್ಷ. ಮಧ್ಯಮ ಕ್ರಮಾಂಕದ ಅತ್ಯಂತ ಆಕ್ರಮಣಕಾರಿ ಎಡಗೈ ಆಟಗಾರ, ಕ್ರಿಕಟಿನ ಮೂರೂ ಆವೃತಿಗಳಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ. ಅತಿ ಹೆಚ್ಚು ಏಕದಿನ ಸಿಕ್ಸರ್‌ ಬಾರಿಸಿದ ಭಾರತೀಯ.ಏಕದಿನ ಪಂದ್ಯಗಳಲ್ಲಿ 5,500ಕ್ಕೂ ಹೆಚ್ಚು ರನ್‌ ಗಳನ್ನು ಪೇರಿಸಿದ   ಒಬ್ಬ ಬಲಿಷ್ಠ ಆಲ್‌ ರೌಂಡರ್‌, ಒಬ್ಬ ಉತ್ತಮ ಆಫ್ ಸ್ಪಿನ್ನರ್‌ ಮತ್ತು ಜಗತ್ತಿನ ಅತ್ಯತ್ತಮ ಪೀಲ್ಡರ್‌ಗಳಲ್ಲಿ ಒಬ್ಬರಾಗಿದ್ದ ಸುರೇಶ್‌ ರೈನಾ  ಅವರಲ್ಲಿ ಇನ್ನಷ್ಟು ಕ್ರಿಕೆಟ್‌  ಬಾಕಿ ಉಳಿದಿತ್ತು. ‌

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮಿಡ್ಲ್ಗ್ ಆರ್ಡರ್‌ ಸತತವಾಗಿ ಸೋಲುತ್ತಿರುವಾಗ ಅವರ ಅಗತ್ಯ ಖಂಡಿತವಾಗಿ ಇತ್ತು. ಚೆನ್ನೈ ಸುಪರ್‌ ಕಿಂಗ್ಸ್‌ ತಂಡದ ಒಬ್ಬ ಶ್ರೇಷ್ಠ ಆಟಗಾರನಾಗಿ ತಂಡದ ಕ್ಯಾಪ್ಟನ್‌ ಧೋನಿಯಷ್ಟೇ ಪಂದ್ಯಗಳನ್ನು ಗೆಲ್ಲಿಸಿಕೊಟ್ಟವರು ಅವರು. ಭಾರತೀಯ ಕ್ರಿಕೆಟ್‌ ಕಂಟ್ರೋಲ್‌ ಬೋರ್ಡ್‌   ಮತ್ತು ಆಯ್ಕೆ ಮಂಡಳಿ ಅವಕೃಪೆ ತೋರಿದ್ದು ನಿಜಕ್ಕೂ ವಿಷಾದನೀಯ.

ನಂಬರ್‌ 3 ಸ್ಥಾನಕ್ಕೆ ತುಂಬ ಚೆನ್ನಾಗಿ ಹೊಂದಿಕೊಳ್ಳುವ ಅವರನ್ನು ನಂಬರ್‌ 5 ಅಥವಾ ನಂಬರ್‌ 6 ಸ್ಥಾನದಲ್ಲಿ ಆಡಿಸಲಾಯಿತು. ಉತ್ತಮ ಫಾರ್ಮಲ್ಲಿ ಇರುವಾಗಲೇ ತಂಡದಿಂದ ಕೈಬಿಡಲಾಯಿತು.ಅವರಂಥ ಸ್ವಾಭಿಮಾನಿ ಆಟಗಾರನಿಗೆ ಪದೇ ಪದೆ ನಿನ್ನ ಅರ್ಹತೆಯನ್ನು ಸಾಬೀತುಪಡಿಸು ಎಂದು ಕ್ಲಬ್‌  ಲೆವೆಲ್‌  ಪಂದ್ಯಗಳಲ್ಲಿ ಮತ್ತೆ ಮತ್ತೆ ಆಡಿಸಿದ್ದು ತುಂಬ ನೋವು ಕೊಟ್ಟಿರಬೇಕು. ಇದರಿಂದಾಗಿ ನಿವೃತ್ತಿ ಪಡೆಯಲು ಅವಕಾಶ ಕಾದು ಕುಳಿತಿದ್ದ ಅವರಿಗೆ ತನ್ನ ಗೆಳೆಯನ ನಿವೃತ್ತಿ ಘೋಷಣೆ ಹೊರ ನಡೆಯುವ ಅವಕಾಶವನ್ನು ಕೊಟ್ಟಿತು. ಹಾಗೇ  ಅವಸರದ ನಿರ್ಧಾರ ಅನಿಸಿದರೂ ಅವರ ಮಟ್ಟಿಗೆ ಅದು ಪೂರ್ವ ನಿಯೋಜಿತ ಘೋಷಣೆಯೇ ಆಗಿತ್ತು.   ಇದರಿಂದಾಗಿ ನಷ್ಟವಾದದ್ದು ಭಾರತೀಯ ಕ್ರಿಕೆಟ್‌ ತಂಡಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಎಂಬುದು ಅಕ್ಷರಶಃ ಸತ್ಯ.

 









































































































error: Content is protected !!
Scroll to Top