ಶ್ರೀನಗರ, ಆ. 1 : ಸ್ವಾತಂತ್ರ್ಯ ಲಭಿಸಿದ ಬಳಿಕ ಇಷ್ಟರ ತನಕ ಕುಪ್ವಾರ ಜಿಲ್ಲೆಯಲ್ಲಿ ಗಡಿಗೆ ಒತ್ತಿಕೊಂಡಿರುವ ಈ ಮೂರು ಹಳ್ಳಿಗಳು ಕಂಡದ್ದು ಗಡಿಯಾಚೆಗಿನಿಂದ ಹಾರಿ ಬರುವ ಗುಂಡುಗಳನ್ನು ಮತ್ತು ಬಾಂಬ್ ಗಳನ್ನು. ವರ್ಷದ ಆರು ತಿಂಗಳು ಹಿಮಪಾತದಿಂದ ಮುಚ್ಚಿರುತ್ತವೆ ಈ ಹಳ್ಳಿಗಳು. ಹಳ್ಳಿಗಳ ಸುಮಾರು 14,000 ಜನರು ಅಕ್ಷರಶಃ ಕಗ್ಗತ್ತಲಲ್ಲಿ. ಯಾಕೆಂದರೆ ಈ ಹಳ್ಳಿಗಳಿಗೆ ಇಷ್ಟರ ತನಕ ವಿದ್ಯತ್ ಸಂಪರ್ಕವೇ ಇರಲಿಲ್ಲ.
ಎರಡು ದಿನದ ಹಿಂದೆ ಕಾಶ್ಮೀರ ವಿದ್ಯುಚ್ಛಕ್ತಿ ಮಂಡಳಿ ಇಲ್ಲೊಂದು 33 ಕೆ.ವಿ. ಸಾಮರ್ಥ್ಯದ ಕೇಂದ್ರ ಸ್ಥಾಪಿಸಿ ಗಡಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಕೇರನ್ , ಮುಂಡಿಯನ್ ಮತ್ತು ಪತ್ರು ಎಂಬ ಈ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದೆ. ಹೀಗೆ ಸ್ವಾತಂತ್ರ್ಯ ಸಿಕ್ಕಿದ 73 ವರ್ಷಗಳ ಬಳಿಕ ಗಡಿಯಲ್ಲಿರುವ ಈ ಹಳ್ಳಿಗಳು ಬೆಳಕು ಕಾಣುವಂತಾಯಿತು.