ಸ್ವಂತ ಕಟ್ಟಡ, ಐಎನ್‌ಸಿ ಮಾನ್ಯತೆಗಾಗಿ ಸಿಎಂ ಮೊರೆ ಹೋದ ಬಿಎಸ್‌ಸಿ ನರ್ಸಿಂಗ್‌ ವಿದ್ಯಾರ್ಥಿಗಳು

ಕಾರ್ಕಳ : ಸ್ವಂತ ಕಟ್ಟಡ, ಐಎನ್‌ಸಿ ಮಾನ್ಯತೆ ಸೇರಿದಂತೆ ಕಾಲೇಜಿಗೆ ಮೂಲಸೌಕರ್ಯ ಒದಗಿಸಿಕೊಡುವಂತೆ ಕಾರ್ಕಳ ಬಿಎಸ್‌ಸಿ ನರ್ಸಿಂಗ್‌ ವಿದ್ಯಾರ್ಥಿಗಳು ಸಿಎಂ ಬಳಿ ಮನವಿ ಮಾಡಿಕೊಂಡರು. ಫೆ.25ರಂದು ಕಾರ್ಕಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಎಂ ಅವರಿಗೆ ಮನವಿ ಸಲ್ಲಿಸಿದ್ದು, ತಕ್ಷಣವೇ ಸ್ಪಂದಿಸಿದ ಅವರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

2021ರಲ್ಲಿ ಆರಂಭವಾದ ಸರಕಾರಿ ಬಿಎಸ್‌ಸಿ ನರ್ಸಿಂಗ್ ಕಾಲೇಜು ಕಾರ್ಕಳ ತಾಲೂಕು ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೂಲಸೌಕರ್ಯಗಳಿಲ್ಲದೇ ಸೊರಗುತ್ತಿದೆ. ಪರಿಣಾಮವಾಗಿ ಇಲ್ಲಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ದೊರೆತಿಲ್ಲ. ಪರಿಣಾಮವಾಗಿ ವಿದ್ಯಾರ್ಥಿಗಳು ತೇರ್ಗಡೆ ಹೊಂದುವಾಗ ಅವರಿಗೆ ಇಂಡಿಯನ್‌ ನರ್ಸಿಂಗ್‌ ಸರ್ಟಿಫೀಕೆಟ್‌ (INC) ಸಿಗುವುದಿಲ್ಲ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಉದ್ಯೋಗ ಹಾಗೂ ವಿದೇಶಿ ಉದ್ಯೋಗಾವಕಾಶಗಳಿಂದ ವಂಚಿತರಾಗುವ ಭೀತಿಯಲ್ಲಿದ್ದೇವೆ ಎಂದು ಸಿಎಂ ಗಮನಕ್ಕೆ ತಂದಾಗ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ವಿದ್ಯಾರ್ಥಿಗಳಾದ ನಿತೇಶ್‌ ಫ್ಲಾಯ್ಡ್‌, ಪೃಥ್ವಿನ್‌, ಸುಶಾಂತ್‌ ಮೊದಲಾದವರು ಈ ಸಂದರ್ಭದಲ್ಲಿದ್ದರು.

4 ವರ್ಷದ ಈ ಕೋರ್ಸ್‌ಗೆ ಪ್ರತಿ ಬ್ಯಾಚ್‌ನಲ್ಲಿ 40 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಅಂತೆಯೇ ನಾಲ್ಕು ಬ್ಯಾಚ್‌ನಲ್ಲಿ ಒಟ್ಟು 160 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾರ್ಕಳ ಮಾತ್ರವಲ್ಲದೇ ಚಿತ್ರದುರ್ಗ, ಬೀದರ್‌, ಹಾವೇರಿ ಹೀಗೆ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ, ಸುಸಜ್ಜಿತವಾದ ತರಗತಿ ಕೋಣೆ, ಲ್ಯಾಬ್, ಗ್ರಂಥಾಲಯ, ಕ್ರೀಡಾಂಗಣ, ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಇಲ್ಲಿಲ್ಲ. ಕಾಲೇಜಿನ ಸ್ವಚ್ಛತಾ ಕಾರ್ಯಕ್ಕೂ ವಿದ್ಯಾರ್ಥಿಗಳೇ ಹಣ ಸಂಗ್ರಹಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. 16 ಉಪನ್ಯಾಸಕರ ಅಗತ್ಯವಿದ್ದರೂ ಕೇವಲ 5 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಬೋಧನೆಗೆ ಸಮಸ್ಯೆಯಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ








































































































error: Content is protected !!
Scroll to Top