ಮಾನವೀಯತೆಯೊಂದಿಗೆ ಸಾಮಾಜಿಕ ಸೇವೆ – ಸಿ.ಎ.ದೇವಾನಂದ್
ಕಾರ್ಕಳ : ಮಾನವೀಯತೆಯೊಂದಿಗೆ ಸಾಮಾಜಿಕ ಸೇವೆ ರೋಟರಿ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಕಳ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ಪ್ರತಿ ವರ್ಷ ನಾಯಕರು ಬದಲಾಗುತ್ತಾರೆ. ಆದರೆ, ಸೇವಾ ವಿಧಾನ ಬದಲಾಗುವುದಿಲ್ಲ. ಸ್ವಾರ್ಥರಹಿತ ಸೇವೆಯಿಂದ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ಎಂದು ರೋಟರಿ ಜಿಲ್ಲಾ ಲರ್ನಿಂಗ್ ಫೆಸಿಲಿಟೇಟರ್ ಸಿಎ ದೇವ್ ಆನಂದ್ ಹೇಳಿದರು.
ಅವರು ಜು. 8ರಂದು ಕಾರ್ಕಳದ ಪ್ರಕಾಶ್ ಹೊಟೇಲ್ನ ಉತ್ಸವ ಸಭಾಂಗಣದಲ್ಲಿ ನಡೆದ ಕಾರ್ಕಳ ರೋಟರಿ ಕ್ಲಬ್ನ 2026-27ನೇ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಕೆ. ವಿಜೇಂದ್ರ ಕುಮಾರ್ ಅವರ ಪದಗ್ರಹಣ ನೆರವೇರಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ನೂತನ ಅಧ್ಯಕ್ಷರಿಗೆ ಕೊರಳ ಪಟ್ಟಿ ಧರಿಸಿದರು.

ʼಸರ್ವಿಸ್ʼ ವಿಶೇಷ ಸಂಚಿಕೆ ಬಿಡುಗಡೆ
ರೋಟರಿ ಅಸಿಸ್ಟೆಂಟ್ ಗವರ್ನರ್ ಸುರೇಶ್ ನಾಯಕ್ ಅವರು ರೇಖಾ ಉಪಾಧ್ಯಾಯ ಅವರ ಸಂಪಾದಕತ್ವ ಮತ್ತು ಗಣೇಶ್ ಸಾಲ್ಯಾನ್ ಸಹ ಸಂಪಾದಕತ್ವದ ಕ್ಲಬ್ನ ಗೃಹ ಪತ್ರಿಕೆ ‘ಸರ್ವೀಸ್’ನ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. 2026-27ನೇ ಸಾಲಿನ ಜೋನಲ್ ಲೆಫ್ಟಿನೆಂಟ್ ಡಾ. ಕೃಷ್ಣಪ್ರಸಾದ್, 2025-26ನೇ ಸಾಲಿನ ಅಸಿಟೆಂಟ್ ಗವರ್ನರ್ ವಿಘ್ನೇಶ್ ಶೆಣೈ, ಜೋನಲ್ ಲೆಫ್ಟಿನೆಂಟ್ ಜೋನ್ ಆರ್. ಡಿ’ಸಿಲ್ವಾ ಶುಭಾಶಂಸನೆಗೈದರು.
ಅಧ್ಯಕ್ಷ ವಿಜೇಂದ್ರ ಕುಮಾರ್ ಮಾತನಾಡಿ, ತನ್ನ ಅಧಿಕಾರವಧಿಯಲ್ಲಿ ನಡೆಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ನವೀನ್ಚಂದ್ರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಚೇತನ್ ನಾಯಕ್, ನಿಕಟಪೂರ್ವ ಅಸಿಟೆಂಟ್ ಗವರ್ನರ್ ವಿಘ್ನೇಶ್ ಶೆಣೈ, ನಿಕಟಪೂರ್ವ ಜೋನಲ್ ಲೆಫ್ಟಿನೆಂಟ್ ಜೋನ್ ಆರ್. ಡಿ’ಸಿಲ್ವಾ ಅವರನ್ನು ಅಭಿನಂದಿಸಲಾಯಿತು. ಐವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಚೇತನ್ ನಾಯಕ್ ವರದಿ ವಾಚಿಸಿದರು. ರೇಖಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಉದಯ್ ಕುಮಾರ್ ಕಡಂಬ ವಂದಿಸಿದರು.










































































