ದೆಹಲಿ : ವಿರೋಧ ಪಕ್ಷಗಳ ಇಂಡಿಯಾ ಮೈತ್ರಿ ಕೂಟ ಹಿಂದೂ ಧರ್ಮ ದ್ವೇಷಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷ ಡಿಎಂಕೆ ನಾಯಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಪುತ್ರ ತಮಿಳುನಾಡು ರಾಜ್ಯ ಸರಕಾರದ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿರುವ ಅಮಿತ್ ಶಾ, ಈ ಹೇಳಿಕೆ ನಮ್ಮ ಪರಂಪರೆ ಮೇಲಿನ ದಾಳಿ ಎಂದು ಹೇಳೀದ್ದಾರೆ.
ಶನಿವಾರ ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಸನಾತನ ಧರ್ಮವನ್ನು ಡೆಂಗ್ಯೂ ಹಾಗೂ ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಉದಯನಿಧಿ ಸ್ಟಾಲಿನ್ನ ಹೇಳಿಕೆಯನ್ನು ತೀವ್ರವಾಗಿ ಕಂಡಿಸಿರುವ ಅಮಿತ್ ಶಾ, ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷವಾಗಿರುವ ಡಿಎಂಕೆ ವೋಟ್ ಬ್ಯಾಂಕ್ ರಾಜಕಾರಣ ಹಾಗೂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಲಿ ಮಾಡಿದರು.
ಚುನಾವಣೆ ಹೊಸ್ತಿಲಿನಲ್ಲಿ ಇರುವ ರಾಜಸ್ಥಾನದಲ್ಲಿ ಬಿಜೆಪಿ ಪರಿವಹಣ ಯಾತ್ರೆ ವೇಳೆ ಮಾತನಾಡಿದ ಅಮಿತ್ ಶಾ, ಡಿಎಂಕೆ ಜೊತೆಯಲ್ಲೇ ಇಂಡಿಯಾ ಮೈತ್ರಿ ಕೂಟವನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ 2010ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನೂ ಸ್ಮರಿಸಿದ ಅಮಿತ್ ಶಾ, ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ – ಇ – ತೊಯ್ಬಾಗಿಂತಲೂ ಹಿಂದೂ ಸಂಘಟನೆಗಳು ಅತಿ ದೊಡ್ಡ ಅಪಾಯಾರಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದೇ ಮನಸ್ಥಿತಿ ಈಗ ಮುಂದುವರೆದಿದೆ ಎಂದು ಅಮಿತ್ ಶಾ ಹೇಳಿದರು.