ಕೆನರ ಬ್ಯಾಂಕಿಗೆ 538 ಕೋ. ರೂ. ವಂಚಿಸಿದ ಪ್ರಕರಣ
ಹೊಸದಿಲ್ಲಿ : ನಷ್ಟದಿಂದಾಗಿ ಮುಚ್ಚಿರುವ ಜೆಟ್ ಏರ್ವೇಸ್ ವಿಮಾನ ಯಾನ ಕಂಪನಿಯ ಸ್ಥಾಪಕ ನರೇಶ್ ಗೋಯಲ್ ಅವರನ್ನು ಕೆನರಾ ಬ್ಯಾಂಕಿಗೆ 538 ಕೋ. ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
ಗೋಯಲ್ ಗಂಭೀರ ಸ್ವರೂಪದ ಆರ್ಥಿಕ ವಂಚನೆ ತನಿಖೆ ವಿಭಾಗಕ್ಕೆ (ಎಸ್ಎಫ್ಐಒ) ವಿಚಾರಣೆಗೆಂದು ಹೋಗುತ್ತಿರುವಾಗಲೇ ಇ.ಡಿ. ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಸಿಬಿಐ ನರೇಶ್ ಗೋಯಲ್ ವಿರುದ್ಧ ಬ್ಯಾಂಕಿಗೆ ವಂಚಿಸಿದ ಪ್ರಕರಣದ ತನಿಖೆ ಪ್ರಾರಂಭಸಿತ್ತು. ಮೇ 5ರಂದು ಗೋಯಲ್ ಮನೆಯೂ ಸೇರಿ ಮುಂಬಯಿಯಲ್ಲಿರುವ ಜೆಟ್ ಏರ್ವೇಸ್ನ ಏಳು ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಲಾಗಿತ್ತು.
ಕಳೆದ ವರ್ಷ ನವಂಬರ್ 11ರಂದು ಗೋಯಲ್ ವಿರುದ್ಧ ಬ್ಯಾಂಕಿಗೆ ವಂಚಿಸಿದ ಕುರಿತು ದೂರು ದಾಖಲಾಗಿತ್ತು. ಕೆನರ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಪಿ.ಸಂತೋಷ್ ನೀಡಿದ ದೂರಿನಲ್ಲಿ ಅನಿತಾ ನರೇಶ್ ಗೋಯಲ್, ಗೌರಂಗ್ ಆನಂದ ಶೆಟ್ಟಿ ಸಹಿತ ಹಲವರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಸುಮಾರು 25 ವರ್ಷ ವಿಮಾನ ಯಾನ ಸೇವೆ ಒದಗಿಸಿದ ಜೆಟ್ ಏರ್ವೇಸ್ ನಷ್ಟದಿಂದಾಗಿ 2019ರಲ್ಲಿ ಮುಚ್ಚಿದೆ.