ವ್ಯಾವಹಾರಿಕ ದೃಷ್ಟಿಯಲ್ಲಿ ಎಟಿಎಂ ಗ್ರಾಮೀಣ ಭಾಗಕ್ಕೆ ವರದಾನ : ಸಾಣೂರು ನರಸಿಂಹ ಕಾಮತ್
ಕಾರ್ಕಳ : ಗ್ರಾಮೀಣ ಭಾಗದಲ್ಲಿ ಎಟಿಎಂ ಕಾರ್ಯಾಚರಣೆ ಜನತೆಯ ಆರ್ಥಿಕ ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಕೆಎಂಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯಪಟ್ಟರು. ಅವರು ಎ. 6 ರಂದು ಮುರತಂಗಡಿ ಬ್ಯಾಂಕ್ ಆಫ್ ಬರೋಡ ಶಾಖೆಯ ನೂತನ ನವೀಕೃತ ಹೊಸ ತಂತ್ರಜ್ಞಾನದ ಎಟಿಎಂ ಉದ್ಘಾಟಿಸಿ ಮಾತನಾಡಿದರು. ಮುರತಂಗಡಿ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರೋಡ್ ನಿರ್ಮಾಣವಾಗುವುದರೊಂದಿಗೆ ವಾಣಿಜ್ಯ ಮಳಿಗೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ತನ್ಮೂಲಕ ಬ್ಯಾಂಕ್ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು.
ನೂತನ ನವೀಕೃತ ಎಟಿಎಂ ಗ್ರಾಹಕರಿಗೆ ಹೊಸ ತಂತ್ರಜ್ಞಾನದ ಸ್ಪರ್ಶದ ಜೊತೆಗೆ ವೇಗದ ಬ್ಯಾಂಕಿಂಗ್ ಅನುಭವವನ್ನು ನೀಡಲಿದೆ ಎಂದು ಸಾಣೂರು ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಪ್ರಮೋದ್ ಕಾಮತ್ ಹೇಳಿದರು. ಕೆಎಂಎಫ್ ನಂದಿನಿ ಆಡಳಿತ ನಿರ್ದೇಶಕ ಅಶೋಕ್ ಸಂದರ್ಭೋಚಿತವಾಗಿ ಮಾತನಾಡಿದರು. ಬ್ಯಾಂಕಿನ ಗ್ರಾಹಕ ಚಂದ್ರರಾಜ ಅಧಿಕಾರಿ ನೂತನ ಎಟಿಎಂನಲ್ಲಿ ಪ್ರಥಮ ವಹಿವಾಟನ್ನು ನಡೆಸಿ ಶುಭ ಹಾರೈಸಿದರು. ಈ ಸಂದರ್ಭ ಬ್ಯಾಂಕಿನ ಸಾಣೂರು ಶಾಖೆಯ ಉಪವ್ಯವಸ್ಥಾಪಕ ಹರಿಶ್ಚಂದ್ರ ನಾಯ್ಕ, ಸಿಬ್ಬಂದಿ ಸದಾಶಿವ ಶೆಟ್ಟಿ, ಜಗದೀಶ್ ನಾಯ್ಕ, ಹಿರಿಯ ಗ್ರಾಹಕ ರಮನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು.





















