ಶ್ರೀಲಂಕಾ ಉದ್ವಿಗ್ನ : ಪ್ರಧಾನಿ ಸೇರಿ ಹಲವರ ನಿವಾಸಗಳಿಗೆ ಬೆಂಕಿ

ಕೊಲೊಂಬೊ: ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ವಾರಗಟ್ಟಲೆ ಅಧಿಕಾರಕ್ಕೆ ಅಂಟಿಕೊಂಡ ನಂತರ ಸೋಮವಾರ ರಾಜೀನಾಮೆ ನೀಡಿದ್ದಾರೆ. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ನೇತೃತ್ವದ ಆಡಳಿತ ಕಾರಣವಾಗಿದೆ. ಇದರಿಂದ ಆಹಾರ, ಇಂಧನ ಮತ್ತು ಶಕ್ತಿಯ ಕೊರತೆಯುಂಟಾಗಿದೆ ಎಂದು ಅವರ ಪದಚ್ಯುತಿಗೆ ಒತ್ತಾಯಿಸಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರವಾಗಿದ್ದವು.

ಅಧ್ಯಕ್ಷ ಗೋಟಾಬಯ ಅವರ ಕಚೇರಿಯ ಹೊರಗೆ ಸರ್ಕಾರದ ಆಡಳಿತ ವಿರೋಧಿ ಪ್ರತಿಭಟನಾಕಾರರ ಮೇಲೆ ಅವರ ಬೆಂಬಲಿಗರು ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಮಹಿಂದಾ ರಾಜೀನಾಮೆ ನೀಡಿದರು, ದುರ್ಘಟನೆಯಲ್ಲಿ ಸುಮಾರು 173 ಜನರು ಗಾಯಗೊಂಡಿದ್ದಾರೆ, ರಾಜಪಕ್ಸ ಪರ ರಾಜಕಾರಣಿಗಳ ವಿರುದ್ಧ ವ್ಯಾಪಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ.

ಹಿಂಸಾಚಾರದಲ್ಲಿ ಆಡಳಿತ ಪಕ್ಷದ ಸಂಸದ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಕೊಲಂಬೊದಲ್ಲಿ ಹಿಂಸಾತ್ಮಕ ದೃಶ್ಯಗಳು ಕಂಡುಬಂದ ನಂತರ ಪ್ರಧಾನಿ ಮಹಿಂದಾ, ಅಧ್ಯಕ್ಷ ಗೋಟಾಬಯ ಅವರಿಗೆ ರಾಜೀನಾಮೆ ಪತ್ರವನ್ನು ನಿನ್ನೆ ಕಳುಹಿಸಿದರು.

ಪ್ರಧಾನಿ ರಾಜೀನಾಮೆಯೊಂದಿಗೆ ಸಚಿವ ಸಂಪುಟವೂ ವಿಸರ್ಜನೆಯಾಗಿದೆ. ಪ್ರಸ್ತುತ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು, ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಸಂಸತ್ತನ್ನು ಪ್ರತಿನಿಧಿಸುವ ಎಲ್ಲಾ ಪಕ್ಷಗಳನ್ನು ರಾಷ್ಟ್ರೀಯ ಏಕತೆ ಸರ್ಕಾರಕ್ಕೆ ಸೇರಲು ಆಹ್ವಾನಿಸಿದ್ದಾರೆ ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಅಧ್ಯಕ್ಷರು ಎಲ್ಲಾ ನಾಗರಿಕರನ್ನು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಮಧ್ಯೆ, ಅಧಿಕಾರಿಗಳು ನಿನ್ನೆ ಸೋಮವಾರ ರಾತ್ರಿ 7 ಗಂಟೆಯಿಂದ ಬುಧವಾರ ಬೆಳಗ್ಗೆ 7 ಗಂಟೆಯವರೆಗೆ  ಶ್ರೀಲಂಕದಾದ್ಯಂತ ವಿಧಿಸಲಾದ ಕರ್ಫ್ಯೂ ಅನ್ನು ವಿಸ್ತರಿಸಿದ್ದಾರೆ. ಇದಕ್ಕೂ ಮೊದಲು, ಮಹಿಂದ ಬೆಂಬಲಿಗರು ಮೈನಾಗೊಗಾಮಾ ಮತ್ತು ಗೊಟಗೊಗಾಮಾ ಪ್ರತಿಭಟನಾ ಸ್ಥಳಗಳಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದರು.

ಪ್ರಧಾನಿಯವರ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ಎದುರಿನ ಡೇರೆಗಳನ್ನು ಗುಂಪೊಂದು ಕೆಡವಿತು. ಅಶಿಸ್ತಿನ ಆಡಳಿತ ಪಕ್ಷದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಪ್ರತಿಭಟನಾಕಾರರು ಗೊಟಗೋಗಾಮ ಪ್ರವೇಶಿಸದಂತೆ ಪೊಲೀಸರು ಮಾನವ ಸರಪಳಿ ನಿರ್ಮಿಸಿದ್ದರು. ಜನಸಮೂಹವು ಪೊಲೀಸರ ಮಾನವ ಸರಪಳಿಯನ್ನು ದಾಟಿ ಗೊಟಗೋಗಮ ಮೇಲೆ ದಾಳಿ ಮಾಡಿತು. ದಾಳಿಯಲ್ಲಿ ಸುಮಾರು 173 ಜನರು ಗಾಯಗೊಂಡಿದ್ದಾರೆ.













































error: Content is protected !!
Scroll to Top