ಅಬುಧಾಬಿ, ಸೆ. 25 : ನಿನ್ನೆ ನಡೆದ ಐಪಿಎಲ್ನ ಬೆಂಗಳೂರು ಮತ್ತು ಪಂಜಾಬ್ ತಂಡಗಳ ಪಂದ್ಯದ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ನಿರ್ವಹಣೆಯನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಟನೂಷ್ಕಾ ಶರ್ಮ ಬಗ್ಗೆ ಸುನಿಲ್ ಗಾವಸ್ಕರ್ ಆಡಿದ ಮಾತೊಂದು ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಅಭಿರುಚಿಯ ಈ ಕಮೆಂಟ್ ಬಗ್ಗೆ ನೆಟ್ಟಿಗರು ಸುನಿಲ್ ಗಾವಸ್ಕರ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಕೊಹ್ಲಿ ಅಭಿಮಾನಿಗಳು ಗಾವಸ್ಕರ್ ಅವರನ್ನು ಕಮೆಂಟರಿ ಪ್ಯಾನೆಲ್ನಿಂದ ಕಿತ್ತುಹಾಕಬೇಕೆಂದು ಆಗ್ರಹಿಸಿದ್ದಾರೆ.
ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಅನೂಷ್ಕಾ ಕುರಿತು ಮಾತನಾಡಿದ್ದರು. “ಇನ್ನೋನೆ ಲಾಕ್ ಡೌನ್ ಮೇ ತೋ ಬಸ್ ಅನೂಷ್ಕಾ ಕೀ ಗೇಂದೋಂ ಕಿ ಪ್ರಾಕ್ಟೀಸ್ ಕೀ ಹೈ (ಲಾಕ್ ಟೈಮ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳೊಂದಿಗೆ ಮಾತ್ರ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಸುನಿಲ್ ಗಾವಸ್ಕರ್ ಹೇಳಿಕೆ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ, ನಿಮ್ಮ ಮಾತು ಅಸಹ್ಯಕರವಾಗಿದೆ. ಪತಿಯ ಆಟಕ್ಕೆ ಪತ್ನಿಯನ್ನು ಏಕೆ ಎಳೆದು ತರುತ್ತೀರಾ? ನನ್ನ ಬಗ್ಗೆ ನೀವು ಹೇಳಿಕೆ ನೀಡಲು ಏಕೆ ಯೋಚಿಸಿದ್ದೀರಿ ಎಂಬುದನ್ನು ವಿವರಿಸಿ. ಇದು 2020. ಆದರೆ ನನಗೆ ಸಂಬಂಧಿಸಿದ ವಿಚಾರಗಳು ಇನ್ನೂ ಬದಲಾಗಿಲ್ಲ. ಕ್ರಿಕೆಟ್ ವಿಚಾರಕ್ಕೆ ನನ್ನನ್ನು ಎಳೆದು ತರುವುದನ್ನು ಮೊದಲು ನಿಲ್ಲಿಸಿ ಎಂದು ಎಂದಿದ್ದಾರೆ.

ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಒಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಮುಖ್ಯವಾಗಿ ಪಂಜಾಬ್ನ ಅಪಾಯಕಾರಿ ಆಟಗಾರ, ನಾಯಕ ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಬಾರಿ ಕೈಚೆಲ್ಲಿದ್ದರು. ಇದೇ ಬೆಂಗಳೂರಿನ ಗೆಲುವಿಗೆ ಮುಳುವಾಯಿತು. ಬಳಿಕ ಬ್ಯಾಟಿಂಗ್ ವೇಳೆ ಕೊಹ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ವಿರಾಟ್ ಕೊಹ್ಲಿ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು.
ಕೊಹ್ಲಿಯಿಂದ ಎರಡೆರಡು ಬಾರಿ ಜೀವದಾನ ಪಡೆದ ರಾಹುಲ್ 69 ಎಸೆತಗಳಲ್ಲಿ 14 ಫೋರ್, 7 ಸಿಕ್ಸರ್ ಸೇರಿ 132 ರನ್ ಚಚ್ಚಿದರು. ಹೀಗಾಗಿ ಪಂಜಾಬ್ 206 ರನ್ ಕಲೆ ಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ ನೀರಸ ಬ್ಯಾಟಿಂಗ್ನೊಂದಿಗೆ 109 ರನ್ ಸೇರಿಸಿ 97 ರನ್ನಿಂದ ಸೋತಿದೆ.


































































