ಮುಂಬಯಿ, ಸೆ.4: ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಅವರು ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಮೆಂಟಲ್ ಕೇಸ್ ಎಂದು ಕರೆದಿದ್ದಾರೆ.
ಮುಂಬಯಿ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ ಎಂದಿರುವ ಕಂಗನಾ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾವುತ್ ಈ ಹೇಳಿಕೆ ನೀಡಿದ್ದಾರೆ.
ಖಾಸಗಿ ಟಿವಿ ವಾಹಿನಿ ಜೊತೆ ಮಾತನಾಡಿದ ರಾವುತ್ , ಕಂಗನಾ ತನ್ನ ಅನ್ನದ ಬಟ್ಟಲಿಗೆ ಉಗುಳುತ್ತಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಅವರನ್ನು ಬೆಂಬಲಿಸುತ್ತಿವೆ.

ಕಂಗನಾ ಎರಡು ದಿನಗಳ ಮಟ್ಟಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗುವುದಾದರೆ ಅದರ ಖರ್ಚನ್ನು ಸರಕಾರವೇ ಭರಿಸಲು ತಯಾರಿದೆ. ಕೇಂದ್ರ ಸರಕಾರ ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಎನ್ನುತ್ತಿದೆ. ಹೀಗಿರುವಾಗ ಕಂಗಣಾ ಯಾವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅವರು ಉಗ್ರರ ಪರವಾಗಿದ್ದಾರೆಯೇ?ಅವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಬರುತ್ತಿದೆ ಎಂದು ರಾವುತ್ ತಿರುಗೇಟು ನೀಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಕೇಸಿಗೆ ಸಂಬಂಧಿಸಿ ಬಹಿರಂಗ ಹೇಳಿಕೆ ನೀಡಿರುವ ಕಂಗನಾಗೆ ಸರಕಾರ ಭದ್ರತೆ ಕೊಡುತ್ತಿಲ್ಲ ಎಂದು ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಕಂಗಣಾ ನನಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಅನುಭವವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಅವರ ಹೇಳಿಕೆ ಈಗ ಚರ್ಚೆಯಲ್ಲಿದೆ.

































































