ಬೆಂಗಳೂರು,ಆ. 12: ಫೇಸ್ಬುಕ್ನಲ್ಲಿ ಮೊಹಮ್ಮದ್ ಪೈಗಂಬರ್ ಕುರಿತು ಹಾಕಲಾಗಿದ್ದ ಅವಹೇಳನಕಾರಿ ಪೋಸ್ಟ್ ನೆಪ ಮಾಡಿಕೊಂಡು ನಿನ್ನೆ ರಾತ್ರಿ ನಡೆದ ಗಲಭೆ, ಹಿಂಸಾಚಾರ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಅಥವಾ ಸಿಐಡಿಗೆ ವಹಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಪ್ರಮುಖ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೊಂದಿಗೆ ಸಿಎಂ ಸಂಜೆ ಸಭೆ ನಡೆಸಲಿದ್ದಾರೆ. ಬಲ್ಲ ಮೂಲಗಳು ಹೇಳುವ ಪ್ರಕಾರ ಎಸ್ಐಟಿ ಅಥವಾ ಸಿಐಡಿಗೆ ತನಿಖೆಯ ಹೊಣೆ ನೀಡುವ ಸಾಧ್ತೆಯಿದೆ. ಒಂದೂವರೆ ತಿಂಗಳ ಕಾಲಮಿತಿಯಲ್ಲಿ ತನಿಖೆ ಮಾಡಿ ವರದಿ ಸಲ್ಲಿಸಲ ಸರಕಾ ರಆದೇಶಿಸಲಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ಮೇರೆಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಶಾಂತಿಸಭೆ ನಡೆಸುತ್ತಿದ್ಧಾರೆ. ದೇವರಜೀವನಹಳ್ಳಿ ವ್ಯಾಪ್ತಿಯ ಧಾರ್ಮಿಕ ಮುಖಂಡರು, ಸಮಾಜ ಸೇವಕರನ್ನು ಈ ಸಭೆಗೆ ಕರೆಯಲಾಗಿದೆ.
ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಮುಸ್ಲಿಮರು ರೊಚ್ಚಿಗೆದ್ದು ನಿನ್ನೆ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಾಗಿವೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲಾಗಿದೆ. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


































































