ದಿಲ್ಲಿ, ಆ. 9: ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರಿಗೆ 1 ಲಕ್ಷ ಕೋ.ರೂ.ಯ ಭರ್ಜರಿ ಕೊಡುಗೆ ನೀಡಿದ್ದಾರೆ. ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕೊಡುಗೆಯನ್ನು ಘೋಷಿಸಿದರು. ಕೃಷಿ ಮೂಲಸೌಕರ್ಯ ನಿಧಿಯಡಿ ಇದರಿಂದ ರೈತರ ಬೆಳೆಗೆ ಉತ್ತಮ ಬೆಲೆ ಪಡೆಯಲು ಹಣಕಾಸು ಸೌಲಭ್ಯವನ್ನು ಪಡೆಯುವ ಅವಕಾಶ ಲಭಿಸಲಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಪಿಎಂ ಕಿಸಾನ್ ಯೋಜನಾ’ ಅಡಿ ದೇಶದ ಒಟ್ಟು 8.5 ಕೋಟಿ ರೈತರಿಗೆ ಯೋಜನೆಯ ಆರನೆಯ ಕಂತಿನ ರೂಪದಲ್ಲಿ 17,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.
‘ಕೃಷಿ ಮೂಲಸೌಕರ್ಯ ನಿಧಿ’ಗೆ 1 ಲಕ್ಷ ಕೋ. ರೂ.ಗಳ ಹಣಕಾಸು ಸೌಲಭ್ಯ ಪದಗಿಸುವ ಪ್ರಸ್ತಾವವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ನಿಧಿಯು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಲಿದೆ. ಇದಲ್ಲದೆ ಸಮುದಾಯ ಕೃಷಿ ಸೌಲಭ್ಯಗಳಾದ ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಉತ್ತಮ ಸುಗ್ಗಿಯ ನಂತರದ ನಿರ್ವಹಣೆಗಾಗಿ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಕಾರಿಯಾಗಲಿದೆ
ಈ ಸೌಲಭ್ಯಗಳನ್ನು ಆರಂಭಗೊಳ್ಳುವುದರಿಂದ ರೈತರಿಗೆ ಅವರು ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿದೆ. ಈ ಸೌಲಭ್ಯಗಳಿಂದಾಗಿ, ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಮತ್ತು ತಮ್ಮ ಸರಕುಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿದೆ. ಇದು ಅವರ ಆದಾಯವನ್ನು ಹೆಚ್ಚಿಸುತ್ತದೆ. ಆಹಾರ ಸಂಸ್ಕರಣೆಯ ಅನುಕೂಲದಿಂದ ರೈತರು ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗಲಿದೆ.




















