ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ

ಕಂಬಳ ಆಯೋಜನೆ ದುಂದುವೆಚ್ಚ ಎನ್ನುವುದಾದರೆ ಕೋಟಿಕಂಠ ಗಾಯನ, ಕಾರ್ಕಳ ಉತ್ಸವ, ಥೀಮ್ ಪಾರ್ಕ್ ಉದ್ಘಾಟನೆ ದುಂದು ವೆಚ್ಚವಲ್ಲವೇ ? ಶುಭದ ರಾವ್ ಪ್ರಶ್ನೆ

ಕಾರ್ಕಳ : ಕಾನೂನು ತೊಡಕಿನಿಂದ ನಿಂತೇ ಹೋಗುತ್ತದೆ ಎನ್ನುವ ಆತಂಕದಲ್ಲಿದ್ದ ತುಳುನಾಡಿನ ಜನಪದ ಕ್ರೀಡೆ ಕಂಬಳವು ಪುನಃ ‌ಪ್ರಾರಂಭವಾಗಿ ಜನಪ್ರಿಯತೆ ಪಡೆದು ನಾಡ ಹಬ್ಬ ದಸರಾದಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರುವುದು ತುಳುನಾಡಿನ ಜನತೆಗೆ‌ ಹಾಗೂ ಕಂಬಳ ಪ್ರೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಆದರೆ, ಈ ವಿಚಾರವಾಗಿ ಶಾಸಕ‌ ಸುನಿಲ್ ಕುಮಾರ್‌ ಅವರ ಅಪಸ್ವರ ರಾಜಕೀಯ‌ ಪ್ರೇರಿತವಾದುದು ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಮಿಯ್ಯಾರು ಕಂಬಳ ಸಮಿತಿ ಸದಸ್ಯ ಶುಭದ ರಾವ್‌ ಟೀಕಿಸಿದ್ದಾರೆ.

ಸುನಿಲ್‌ ಕುಮಾರ್‌ ಅವರು ಸ್ವತಃ ಕಂಬಳ ಸಮಿತಿಯ ಅಧ್ಯಕ್ಷರಾಗಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದು ವಿಷಾದನೀಯ. ಮೈಸೂರು ದಸರಾ ಹಬ್ಬವು ರಾಜ್ಯದ ಹೆಮ್ಮೆಯ ದ್ಯೋತಕ. ಈ ಸಂದರ್ಭದಲ್ಲಿ ಕಂಬಳ ಕ್ರೀಡಾಕೂಟವನ್ನು ಆಯೋಜನೆ ಮಾಡುವುದರಿಂದ ಕಂಬಳ ಕ್ರೀಡೆಗೆ ಇನ್ನಷ್ಟು ಮೆರುಗು ಸಿಗಲಿದೆ. ದೇಶದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಕಲಾ ಹೆಗ್ಗುರುತುಗಳನ್ನು ಪ್ರದರ್ಶಿಸಿದಂತೆ ಮೈಸೂರು ದಸರಾದ ಸಂದರ್ಭದಲ್ಲಿ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಪದ್ಧತಿ ಹಿಂದಿನಿಂದಲೂ ನಡೆದು‌ ಬಂದಿದೆ. ಅದೇ‌ ಮಾನದಂಡದೊಂದಿಗೆ ದಸರಾದಲ್ಲಿ ಕಂಬಳ ಆಯೋಜನೆಯಿಂದ ತುಳುನಾಡಿನ ಸಂಸ್ಕೃತಿಯ ಪರಿಚಯ ವಿಶ್ವದೆಲ್ಲೆಡೆ ತಲುಪಿ‌ ಇನ್ನೂ‌ ಹೆಚ್ಚು ಜನಪ್ರಿಯತೆ ‌ಪಡೆಯಲು ಅವಕಾಶವಾಗಿದೆ ಎಂದು ಶುಭದ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

ಸಚಿವರಾಗಿದ್ದಾಗ ಎಷ್ಟು ಅನುದಾನ ಬಿಡುಗಡೆಗೊಳಿಸಿದ್ದೀರಿ
ಶಾಸಕರ ನಿಲುವು ಕಂಬಳ ಕ್ರೀಡೆಗೆ ಮಾಡುವ ಅವಮಾನವಾಗಿದೆ. ಮೈಸೂರಿನಲ್ಲಿ ಕಂಬಳ ಯೋಜನೆಗೆ ತಗಲುವ ಖರ್ಚು ದುಂದು ವೆಚ್ಚ ಎನ್ನುವುದಾದರೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ, ಪರಶುರಾಮನ ನಕಲಿ ಪ್ರತಿಮೆ ಉದ್ಘಾಟನೆ‌ ಹಾಗೂ ತನ್ನ ವೈಭವೀಕರಣಕ್ಕೆ ಆಯೋಜಿಸಿದ್ದ ಕಾರ್ಕಳ ಉತ್ಸವ‌ ಮೊದಲಾದ ಕಾರ್ಯಕ್ರಮಗಳಿಗೆ ಮಾಡಿದ ಖರ್ಚು ದುಂದು ವೆಚ್ಚವಲ್ಲವೇ ? ರಾಜ್ಯ ಸರಕಾರ ಇತರ ಕಂಬಳಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು‌ ಮೊಸಳೆ ಕಣ್ಣೀರು ಸುರಿಸುವ ತಾವು ಸಚಿವರಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ಶುಭದ ಪ್ರಶ್ನಿಸಿದ್ದಾರೆ.

ಕರಾವಳಿಯ ಗಂಡು ಕಲೆ ಯಕ್ಷಗಾನ, ಹುಲಿ ಕುಣಿತ, ಆಟಿಯ ಕೂಟ, ಆಟಿಯ ಆಹಾರ ಮೊದಲಾದ ಕಾರ್ಯಕ್ರಮಗಳು‌ ತುಳುನಾಡಿನ ಗಡಿದಾಟಿ ವಿಶ್ವದಾದ್ಯಂತ ಪ್ರದರ್ಶನವಾಗುತ್ತದೆ ಮತ್ತು ಆಚರಿಸಲ್ಪಡುತ್ತದೆ. ಈ ಬಗ್ಗೆ ‌ನಾವೆಲ್ಲರೂ ಹೆಮ್ಮೆಪಟ್ಟು ಪ್ರೋತ್ಸಾಹಿಸಬೇಕು. ಈ ಹಿಂದೆಯೂ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿತ್ತು. ಹೀಗಿರುವಾಗ ಸಂಕುಚಿತ‌ ಮನೋಭಾವ ಸಲ್ಲದು ಎಂದು ಹೇಳಿದ್ದಾರೆ.

ಕಾರ್ಕಳ ಮಿಯ್ಯಾರು ಕಂಬಳವು ಕಾಂಗ್ರೆಸ್ ಶಾಸಕ ದಿ. ಗೋಪಾಲ್ ಭಂಡಾರಿಯವರ ಶತಪ್ರಯತ್ನದ ಫಲ, ಸರಕಾರಿ ಕಂಬಳವನ್ನು ಮೊದಲ ಬಾರಿಗೆ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಾವು ಆ ಕಂಬಳ ಸಮಿತಿಯ ಅಧ್ಯಕ್ಷರಾದ ಕಾರಣ ನಿಮ್ಮ ಗೌರವ ಹೆಚ್ಚಿದೆ ಎನ್ನುವುದನ್ನು ಮರೆಯದಿರಿ. ಕಂಬಳವನ್ನು ವಿರೋಧಿಸುವ ಮನಸ್ಥಿತಿಯನ್ನು ಬಿಟ್ಟು ಪ್ರೋತ್ಸಾಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ‌ ಎಂದು ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.























































error: Content is protected !!
Scroll to Top