ಉದಯ ಕುಮಾರ್‌ ಶೆಟ್ಟಿಯವರ ನಾಟಕವನ್ನು ಪ್ರಜ್ಞಾವಂತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ – ನವೀನ್‌ ನಾಯಕ್‌

ಕಾರ್ಕಳ : ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಕಾರ್ಕಳ ಕಾಂಗ್ರೆಸ್ಸಿಗರೇ ನಿಮಗೆ ಸ್ವಲ್ಪ ಅದರೂ ರಾಜಕೀಯ ನೈತಿಕತೆ ಇದೆಯೇ ? ನಿಮ್ಮ ಪಕ್ಷದ ಸರಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ನಿಮಗೆ ನೈತಿಕತೆ ಇದ್ದರೆ ಜೊತೆಗೆ ತಾಕತ್ತಿದ್ದರೆ ನಿಮ್ಮ ಸರಕಾರದ ವಿರುದ್ಧ ಸ್ಟಿಕ್ಕರ್ ಅಭಿಯಾನ ಆರಂಭಿಸಿ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕ ಅಶೋಕ್ ಕುಮಾರ್ ರೈಯವರು 7% ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರವಾಗಿ ಪತ್ರ ಬರೆದಿರುವುದು ನಿಮ್ಮ ಗಮನಕ್ಕಿಲ್ಲವೇ ? 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಾಗಿನಿಂದ ರಾಜ್ಯದಲ್ಲಿ ಕಲೆಕ್ಷನ್ ವ್ಯವಸ್ಥೆಯ ಒಂದು ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳ ಮೂಲಕ ಕಮಿಷನ್ ಹಣ ಸಂಗ್ರಹ ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಿಗೆ ತಲುಪಿಸುವ ವ್ಯವಸ್ಥಿತ ಕಾರ್ಯ ಯಾವುದೇ ಮುಚ್ಚುಮರೆ ಇಲ್ಲದೇ ನಡೆಯುತ್ತಿದೆ. ಇದನ್ನು ನಾವು ಹೇಳುತ್ತಿಲ್ಲ ನಿಮ್ಮ ಸರಕಾರದ ಅಧಿಕಾರಿಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ನವೀನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನ್ಯ ಉದಯ ಕುಮಾರ್ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಲೆಕ್ಷನ್ ಏಜೆಂಟ್ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿದ್ದುಕೊಂಡು ಅದನ್ನು ಮರೆಮಾಚಲು ನೀವು ಮಾಡುತ್ತಿರುವ ನಾಟಕ ಕಾರ್ಕಳ ಜನತೆಗೆ ಈಗಾಗಲೇ ಗೊತ್ತಾಗಿದೆ. ಸುನಿಲ್ ಕುಮಾರ್ ಅವರು ಪ್ರತಿ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗೃಹಲಕ್ಷ್ಮೀ ಹಗರಣ, ವಾಲ್ಮೀಕಿ ಹಗರಣ, ಶಕ್ತಿ ಯೋಜನೆ ಹಗರಣ, ಮೂಢ ಹಗರಣ ಸೇರಿದಂತೆ ಒಂದೊಂದೇ ಹಗರಣಗಳ ಬಗ್ಗೆ ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಈ ನಿಟ್ಟಿನಲ್ಲಿ ನಾಗೇಂದ್ರ ತನ್ನ ಸಚಿವ ಸ್ಥಾನಕ್ಕೆ ಎರಡನೇ ಬಾರಿ ರಾಜೀನಾಮೆ ನೀಡುವಂತೆ ಆಗಿತ್ತು. ಇದನ್ನೆಲ್ಲಾ ಮರೆ ಮಾಡಲು ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಇಲ್ಲದ ನಮ್ಮ ಶಾಸಕರ ವಿರುದ್ಧ ನೀವು ಈ ತರಹದ ಸುಳ್ಳು ಆರೋಪ ಮಾಡುವುದರಿಂದ ನಮ್ಮ ಶಾಸಕರ ಕಾರ್ಯ ವೈಖರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರ್ಕಳದ ಪ್ರಜ್ಞಾವಂತ ಜನರು ನಿಮ್ಮ ನಾಟಕವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಎಂದು ನವೀನ್‌ ತಿಳಿಸಿದ್ದಾರೆ.

ಉದಯ ಕುಮಾರ್ ಶೆಟ್ಟಿ ಅವರೇ, ನಿಮಗೆ ಕಳಪೆ ಕಾಮಗಾರಿಯ ಪಿತಾಮಹ ಎಂದೆ ಬಿರುದು ಇದೆ. ಹಾಗಾಗಿ ನಿಮಗೆ ಭ್ರಷ್ಟಾಚಾರ ಎಂಬುದು ಬಳುವಳಿಯಾಗಿ ಬಂದಿರಬಹುದು. ಹಾಗಂತ ಎಲ್ಲರೂ ನಿಮ್ಮಂತೆ ಎಂದು ಭಾವಿಸುವುದು ಸರಿಯಲ್ಲ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರಗಿಟ್ಟರೆ ಸ್ವಪಕ್ಷೀಯರು
ಸೆ. 2ರಂದು ಕಾಂಗ್ರೆಸ್ಸಿನ ಸ್ಟಿಕ್ಕರ್ ಅಭಿಯಾನದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿಯವರನ್ನು ಸ್ವಪಕ್ಷದವರೇ ಹೊರಗಿಟ್ಟರೆ ? ಅಥವಾ ಸ್ವತಃ ತಾನೆ ಭಾಗವಹಿಸದೆ ಈ ಅಭಿಯಾನದಿಂದ ದೂರ ಉಳಿದರೆ ? ಎಂಬುವುದು ಕಾರ್ಕಳ ಭಾರತೀಯ ಜನತಾ ಪಾರ್ಟಿಗೆ ಹಾಗೂ ಕಾರ್ಕಳದ ಜನತೆಗೆ ಸಂಶಯ ಮೂಡಿದೆ. ಇದನ್ನು ಶೀಘ್ರ ಬಹಿರಂಗ ಪಡಿಸುವಂತೆ ನಾನು ಈ ಮೂಲಕ ಆಗ್ರಹಿಸುತ್ತೇನೆ ಎಂದು ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







































error: Content is protected !!
Scroll to Top